ಪುತ್ತೂರು: ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ್ದ ಉಪ್ಪಿನಂಗಡಿ ಪೊಲೀಸರು ಪುತ್ತೂರು ಪೊಲೀಸರ ಸಹಾಯದಿಂದ ಪುತ್ತೂರಿನಲ್ಲಿ ಅಡ್ಡ ಹಾಕಿದ ಘಟನೆ ಆ.15ರ ನಸುಕಿನ ವೇಳೆ ನಡೆದಿದೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಝೈಲೊ ವಾಹನದಲ್ಲಿದ್ದ ಭಾರಿ ಪ್ರಮಾಣದ ಅಕ್ರಮ ದನ ಮಾಂಸ ಮತ್ತು ವಾಹವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಬಿಳಿ ಬಣ್ಣದ ಮಹೇಂದ್ರ ಜೈಲೋ ಕಾರು( ಕೆಎ 19 ಎಂಜಿ 9885)ರಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ವೇಗವಾಗಿ ಬರುತ್ತಿದ್ದ ವಾಹನ ತಪಾಸಣೆಗಾಗಿ ನಿಲ್ಲಿಸಲು ಸೂಚನೆ ಕೊಟ್ಟರು ನಿಲ್ಲಿಸಿಲ್ಲ. ಜೈಲೊ ಕಾರಿನ ಚಾಲಕ ಮಂಗಳೂರು ಕಡೆ ಬೊಳ್ಳಾರ್ ಎಂಬಲ್ಲಿ ಚೆಕ್ ಪಾಯಿಂಟ್ ಇದೆ ಎಂದು ಕಾರನ್ನು ಪುತ್ತೂರು ಕಡೆ ಚಲಾಯಿಸಿದ್ದ.
ಈ ಕುರಿತು ಉಪ್ಪಿನಂಗಡಿ ಪೊಲೀಸರು ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತರಾದ ಪುತ್ತೂರು ಪೊಲೀಸರು ಕೆಮ್ಮಾಯಿ ಸಮೀಪ ಕಾರನ್ನು ನಿಲ್ಲಿಸಲು ನೀಡಿದ ಸೂಚನೆಯನ್ನು ಉಲ್ಲಂಘಿಸಿ ಅತೀವೇಗವಾಗಿ ಪುತ್ತೂರು ನಗರದ ಕಡೆಗೆ ಚಲಾಯಿಸಿಕೊಂಡು ಬಂದವನನ್ನು ಇಲಾಖಾ ವಾಹನದಲ್ಲಿ ಬೆನ್ನಟ್ಟುತ್ತಾ ಬಂದಿದರು. ಆರೋಪಿಗಳು ಕಾರನ್ನು ಮಹಮ್ಮಾಯಿ ಟೆಂಪಲ್ ಜಂಕ್ಷನಿಂದಾಗಿ ಪರ್ಲಡ್ಕಕ್ಕೆ ಹೋಗುವ ರಸ್ತೆಯಲ್ಲಿ ಚಲಾಯಿಕೊಂಡು ಹೋಗುತ್ತಿದ್ದ ವೇಳೆ ಪೊಲಿಸರು ಪರ್ಲಡ್ಕ ಪಾಂಗ್ಲಾಯಿ ಸಮೀಪ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಕಾರಿನೊಳಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಬೆಳಕಿಗೆ ಬಂದಿತ್ತು.
ಘಟನೆಯಲ್ಲಿ ಆರೋಪಿಗಳಾದ ಮಂಗಳೂರು ಕುದ್ರೋಳಿ ಕರ್ಬಲ ರಸ್ತೆಯ ಮುನಿರಾ ಮಂಜಿಲ್ ದಿ.ಹಮೀದ್ ಎಂಬವರ ಪುತ್ರ ಮುಸ್ತಾಕ್(50ವ), ಬಂಟ್ವಾಳ ಕಲ್ಲಡ್ಕ ಗೋಳ್ತಮಜಲು ದಿ.ಹೈದರ್ ಎಂಬವರ ಪುತ್ರ ತೌಫಿಕ್(26ವ), ಬಂಟ್ವಾಳ ಕಲ್ಲಡ್ಕದ ಬಿಲ್ ಕೇಸ್ ಕಾಟೇಜ್ ಖಾದ್ರಿ ಬ್ಯಾರಿ ಎಂಬವರ ಪುತ್ರ ಮಹಮ್ಮದ್ ಕಬೀರ್(40ವ)ರವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಾರಿನೊಳಗೆ ರೂ. 1,25ಸಾವಿರದ ಮೌಲ್ಯದ ಸುಮಾರು 700 ಕೆ.ಜಿ ದನದ ಮಾಂಸ, ರೂ. 5,500 ಮೌಲ್ಯದ ಮೂರು ಮೊಬೈಲ್ ಪೋನ್ಗಳನ್ನು, ರೂ. 5ಸಾವಿರ ನಗದು ಹಾಗೂ ಮಾಂಸ ಪ್ಯಾಕ್ ಮಾಡಲು ಉಪಯೋಗಿಸಿದ ಎರಡು ಪ್ಲಾಸ್ಟಿಕ್ ಟರ್ಪಾಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ರೂ. 5ಲಕ್ಷ ಮೌಲ್ಯದ ಜೈಲೋ ಕಾರನ್ನುಕೂಡಾ ವಶಕ್ಕೆ ಪಡೆಯಲಾಗಿದೆ.
ಅರೋಪಿಗಳು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ಹತ್ಯೆ ಮಾಡಿ ಮಾಂಸ ಮಾಡಿ ಅಕ್ರಮವಾಗಿ ಸಾಗಾಟ ಮಾಡಿದ್ದಲ್ಲದೆ, ಮಾನವ ಸಂಚಾರದ ವಾಹನದ ಆರ್.ಸಿ ನಿಯಮವನ್ನು ಉಲ್ಲಂಘನೆ ಮಾಡಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಅಪರಾಧವೆಸಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ನಿರ್ದೇಶನದಂತೆ ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ಪ ಮತ್ತು ಕ್ರೈಮ್ ಎಸ್.ಐ ಚೆಲುವಯ್ಯ ಅವರ ನೇತೃತ್ವದಲ್ಲಿ ಎ.ಎಸ್.ಐ ದುಗ್ಗಪ್ಪ ಗೌಡ, ಎ.ಎಸ್.ಐ ವೆಂಕಟ್ರಮಣ ಗೌಡ, ಹೆಡ್ಕಾನ್ಸ್ಟೇಬಲ್ಗಳಾದ ಜಯರಾಮ, ಜಗದೀಶ್, ಸುರೇಶ್, ಕೃಷ್ಣಪ್ಪ ಮತ್ತು ಉಪ್ಪಿನಂಗಡಿ ಠಾಣೆ ಸಿಬಂದಿಗಳಾದ ಮಧು, ನಜುಂಡ, ಶ್ರೀಧರ್ ಮತ್ತು ವಾಹನ ಚಾಲಕ ಹೋಮ್ ಗಾರ್ಡ್ ಕೇಶವ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಚೆಕ್ಪಾಯಿಂಟ್ ತಪ್ಪಿಸಲು ಹೋಗಿದ್ದರು:
ಅಕ್ರಮ ದನದ ಮಾಂಸವನ್ನು ಸಾಗಾಟದದ ಕುರಿತು ಆರೋಪಿಗಳಲ್ಲಿ ವಿಚಾರಣೆ ನಡೆಸಿದಾಗ ದನದ ಮಾಂಸ ಅಕ್ರಮವಾಗಿದ್ದು, ಬೇಲೂರಿನಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದು, ಉಪ್ಪಿನಂಗಡಿಯ ಬೊಳ್ಳಾರ್ ಎಂಬಲ್ಲಿ ಪೆÇಲೀಸ್ ಚಕ್ ಇದೆ ಎಂದು ಮಾಹಿತಿ ಬಂದಿದ್ದರಿಂದ ನೆಕ್ಕಿಲಾಡಿಯಿಂದ ಪುತ್ತೂರು ಕಡೆಗೆ ಬಂದು ಮಂಗಳೂರಿಗೆ ಹೋಗಲು ಬಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.