ಮಂಗಳೂರು: ಕೋವಿಡ್–19 ಸಂಕಷ್ಟ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸಿದ ಬೆಳ್ತಂಗಡಿ ತಾಲ್ಲೂಕಿನ 250 ಆಶಾ ಕಾರ್ಯಕರ್ತೆಯರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೊಬೈಲ್ ಫೋನ್ಗಳನ್ನು ಶನಿವಾರ ಉಜಿರೆಯಲ್ಲಿ ವಿತರಿಸಿದರು.
ಶಾಸಕ ಹರೀಶ್ ಪೂಂಜ ನೇತೃತ್ವದ ‘ಶ್ರಮಿಕ ಸೇವಾ ಟ್ರಸ್ಟ್’ ವತಿಯಿಂದ ಒಟ್ಟು ₹ 25 ಲಕ್ಷ ಮೌಲ್ಯದ ಮೊಬೈಲ್ ಫೋನ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ನೆಲೆಯಲ್ಲಿ ಮೊಬೈಲ್ ಫೋನ್ ನೀಡುವುದಾಗಿ ಶಾಸಕ ಹರೀಶ್ ಪೂಂಜ ಭರವಸೆ ನೀಡಿದ್ದರು. ಅದರಂತೆ ಈಗ ಈಡೇರಿಸಿದ್ದಾರೆ. ಇದಕ್ಕೆ ಉಜಿರೆಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ರಾಜೇಶ್ ಪೈ, ಲಕ್ಷ್ಮಿ ಗ್ರೂಪ್ ಮಾಲೀಕ ಮೋಹನ್ ಕುಮಾರ್ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೊಬೈಲ್ ಫೋನ್ ವಿತರಿಸಿ, ‘ಇದು ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.