ಬೆಳ್ತಂಗಡಿ: ಕೋವಿಡ್-೧೯ನಿಂದಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಹೊಡೆತ ಬಿದ್ದಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾನಮಯವಾಗಿದೆ. ಶಿಕ್ಷಣ ಇಲಾಖೆ ಹಲವು ಅಡೆತಡೆಗಳನ್ನು ಎದುರಿಸಿ ೨೦೨೦-೨೧ನೇ ಸಾಲಿನ ಎಸೆಸ್ಸೆಲ್ಸಿ ನಡೆಸುತ್ತಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ೩೦ ಪರೀಕ್ಷಾ ಕೇಂದ್ರಗಳನ್ನು ಸಿದ್ದತೆಗೊಳಿಸಲಾಗಿದ್ದು, ೪೨೪೧ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.
** ೩೦ ಪರೀಕ್ಷಾ ಕೇಂದ್ರ-೪೨೪೧ ವಿದ್ಯಾರ್ಥಿಗಳು
ಕೋವಿಡ್ನಿಂದಾಗಿ ವಿದ್ಯಾರ್ಥಿಗಳಿಗೆ ತರಗತಿ ಇಲ್ಲದೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆಟ್ವರ್ಕ್ ಸಮಸ್ಯೆಯಿಂದ ಸರಿಯಾದ ಅಧ್ಯಯನಕ್ಕೆ ತಡೆಯಾಗಿದ್ದರೂ ಧೈರ್ಯದಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಿದ್ದರಾಗಿದ್ದಾರೆ. ಕಳೆದ ವರ್ಷ ೧೩ ಪರೀಕ್ಷಾ ಕೇಂದ್ರ ಹಾಗೂ ೩೮೪೯ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಈ ಬಾರಿ ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ೩೦ ಪರೀಕ್ಷಾ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದ್ದು, ೪೧೫೩ ರೆಗ್ಯುಲರ್ ವಿದ್ಯಾರ್ಥಿಗಳಿಗೆ ೨೯ ಪರೀಕ್ಷಾ ಕೇಂದ್ರಗಳು ಹಾಗೂ ಖಾಸಗಿ ೮೮ ವಿದ್ಯಾರ್ಥಿಗಳಿದ್ದು ಅವರಿಗೆ ಪ್ರತ್ಯೇಕ ಒಂದು ಕೇಂದ್ರ ನಿಯೋಜಿಸಲಾಗಿದ್ದು, ಒಟ್ಟು ೪೨೪೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ೧೨ ಶಾಲೆಗಳಲ್ಲಿ ತುಳು ಬೋಧನೆ ನಡೆಸಲಾಗಿದ್ದು, ತುಳು ಭಾಷೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಿಇಟಿ ಮಾದರಿ (ಒಎಂಆರ್) ಪರೀಕ್ಷೆ ನಡೆಯಲಿದೆ.
** ಕೋವಿಡ್ ಬಾಧಿತ ವಿದ್ಯಾರ್ಥಿಗಳಿಗೂ ಅವಕಾಶ
ಕಂಟೋನ್ಮೆಂಟ್ ಝೋನ್ ಎದುರಾದಲ್ಲಿ ಹೆಚ್ಚುವರಿಯಾಗಿ ನಿಡ್ಲೆ, ಎಸ್.ಡಿ.ಎಂ. ಬೆಳ್ತಂಗಡಿ, ಸೈಂಟ್ ಪೀಟರ್ ಅಳದಂಗಡಿ ಶಾಲೆಯನ್ನು ಕಾಯ್ದಿರಿಸಲಾಗಿದೆ. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಬೆಳ್ತಂಗಡಿ ಮಾದರಿ ಶಾಲೆಯನ್ನು ಪರೀಕ್ಷಾ ಕೋವಿಡ್ ಕೇರ್ ಸೆಂಟರನ್ನಾಗಿ ಗುರುತಿಸಿ, ಇಲ್ಲಿ ಕೋವಿಡ್ ಬಾಧಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ೫೦ ಆಸನಗಳನ್ನು ಸಿದ್ಧಗೊಳಿಸಲಾಗಿದೆ. ಇದಕ್ಕಾಗಿ ಒಂದು ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ.
** ೩೬೬ ಪರೀಕ್ಷಾ ಕೊಠಡಿ-೩೬೬ ಮೇಲ್ವಿಚಾರಕರು
ಪರೀಕ್ಷೆ ನಡೆಸಲು ಒಟ್ಟು ೩೬೬ ಕೊಠಡಿ ಗುರುತಿಸಿ, ೩೬೬ ಮೇಲ್ವಿಚಾರಕರಿಗೆ ಜವಾಬ್ದಾರಿ ನೀಡಿದ್ದು, ೫೦ ಮಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಮುಖ್ಯ ಅಧೀಕ್ಷಕರು-೩೦, ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್-೩೦, ಸ್ಥಾನಿಕ ಅಧಿಕಾರಿ-೩೦, ಮೊಬಲ್ ಸ್ವಾಧೀನಾಧಿಕಾರಿ-೩೦, ವಿದ್ಯಾರ್ಥಿಗಳು ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ೩೦ ಮಂದಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪರೀಕ್ಷಾ ನೊಡೆಲ್ ಅಧಿಕಾರಿಯಾಗಿ ಶಂಭುಶಂಕರ್ ಅವರನ್ನು ನೇಮಕಗೊಳಿಸಲಾಗಿದೆ.
** ತುರ್ತುಸಹಾಯಕ್ಕೆ ಅಧಿಕಾರ ಸಂಪರ್ಕ
ಹಾಲ್ಟಿಕೆಟ್ ಅಥವಾ ಇನ್ನಿತರ ಗೊಂದಲಗಳಿದ್ದಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರು ಕ್ಷೇತ್ರ ಶಿಕ್ಷಣಾಽಕಾರಿ ಎಚ್.ಎಸ್. ವಿರೂಪಾಕ್ಷಪ್ಪ -೯೪೮೦೬೯೫೧೫೭, ಸಮನ್ವಯಧಿಕಾರಿ ಶಂಭುಶಂಕರ್-೯೪೮೦೬೯೫೧೬೪, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ತಾರಕೇಸರಿ- ೯೪೮೧೪೪೩೧೬೬ ಸಂಪರ್ಕಿಸಬಹುದಾಗಿದೆ.
ಎಸೆಸೆಲ್ಸಿ ಪರೀಕ್ಷೆಗೆ ಪೂರಕವಾಗಿ ೩೦ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದ್ದು, ಸಂಪೂರ್ಣ ಸ್ವಚ್ಛತೆ, ಸ್ಯಾನಿಟೈಜೇಶನ್ ಮಾಡಲಾಗಿದೆ. ಶಿಕ್ಷರಿಗೆ ತರಬೇತಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದ್ದು, ವಿದ್ಯಾರ್ಥಿಗಳು ಭಯ ಪಡದೆ ಪರೀಕ್ಷೆ ಎದುರಿಸಬೇಕು.
* ಎಚ್.ಎಸ್. ವಿರೂಪಾಕ್ಷಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ