ಬೆಳ್ತಂಗಡಿ: ತಾಲೂಕಿನಲ್ಲಿ ಗುರುವಾರ ಲೋಕಸಭಾ ಚುನಾವಣೆಯ ಮತದಾನ ಅತ್ಯಂತ ಶಾಂತಿಯುತವಾಗಿ ನಡೆಯಿತು. ಉರಿಬಿಸಿಲನ್ನೂ ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಸರತಿಯ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಲಭ್ಯ ಮಾಹಿತಿಯಂತೆ ತಾಲೂಕಿನಲ್ಲಿ ಶೇ. 81 ರಷ್ಟು ಮತದಾನವಾಗಿದೆ.
ತಾಲೂಕಿನಲ್ಲಿ ಮತಯಂತ್ರಗಳ ಮೂಲಕವಾಗಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದ್ದ ಕಾರಣ ಮತದಾರರು ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಬೇಕಾಗಿ ಬಂತು. ತಾಲೂಕಿನ ಹಲವೆಡೆ ಮತಯಂತ್ರಗಳು ಬೆಳಿಗ್ಗೆಯೇ ಕೈಕೊಟ್ಟ ಕಾರಣ ತಡವಾಗಿ ಮತದಾನ ಆರಂಭವಾಯಿತು. ನಿಟ್ಟಡೆ, ಕಳಿಯ, ಪುದುವೆಟ್ಟು, ನಿಟ್ಟಡ್ಕ, ಬಡಕೋಡಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸಿ ಮತಯಂತ್ರಗಳನ್ನು ಸರಿಪಡಿಸಿದರು.
ತಾಲೂಕಿನಲ್ಲಿ ನಕ್ಸಲ್ಪೀಡಿತ ಮತಗಟ್ಟೆಗಳೆಂದು 42 ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಇಲ್ಲಿ ವಿಶೇಷ ಭದ್ರತಾವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ಆದರೆ ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಜನರು ಈ ಕೇಂದ್ರಗಳಲ್ಲಿಯೂ ಉತ್ಸಾಹದಿಂದ ಆಗಮಿಸಿ ಮತಚಲಾಯಿಸಿದರು. 12 ಸೂಕ್ಷ್ಮ ಮತಗಟ್ಟೆಗಳಲ್ಲಿಯೂ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
42 ಗ್ರಾಮ ಪಂಚಾಯತುಗಳಲ್ಲಿ ಅಗತ್ಯವಿರುವವರಿಗಾಗಿ ವಿಶೇಷವಾಗಿ 63 ವಾಹನ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲೆಡೆ ವೀಲ್ಚೆಯರ್ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. 270 ಮೆಡಿಕಲ್ ಕಿಟ್ಟ್ಗಳನ್ನು ಒದಗಿಸಲಾಗಿತ್ತು, ಹಾಗೂ ಉಜಿರೆ, ವೇಣೂರು, ಕೊಕ್ಕಡ, ನಾರಾವಿಗಳಲ್ಲಿ ಆಂಬೂಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಕಲಾಂಗರು ಹಾಗೂ ಅಶಕ್ತರು ಉತ್ಸಾಹದಿಂದ ಬಂದು ಮತದಾನದಲ್ಲಿ ಭಾಗವಹಿಸುತ್ತಿದ್ದರು. ತಾಲೂಕಿನ ವಿವಿದೆಡೆಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿತ್ತು ಹಲವೆಡೆ ನವದಂಪತಿಗಳು ನೇರವಾಗಿ ಮದುವೆ ಮಂಟಪದಿಂದ ಮತದಾನಕೇಂದ್ರಕ್ಕೆ ಆಗಮಿಸಿ ಮತದಾನಮಾಡಿದರು.
ಬಿಗಿ ಭದ್ರತೆ: ತಾಲೂಕಿನ 241 ಮತಗಟ್ಟೆಗಳಿಗೆ ಶಾಂತಿಯುತ ಮತ್ತು ನಿರ್ಭೀತ ಮತದಾನಕ್ಕಾಗಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಒಂದು ಡಿವೈಎಸ್ಪಿ, 3 ಸಿಪಿಐ, 7 ಪಿಎಸ್ಐ, 14 ಮಂದಿ ಎಸ್ ಐ, 54 ಮಂದಿ ಎಚ್ ಸಿ, 145 ಪಿಸಿ, 176 ಹೋಮ್ ಗಾಡ್ರ್ಗಳನ್ನು ತಾಲೂಕಿನಲ್ಲಿ ನಿಯೋಜಿಸಲಾಗಿತ್ತು. ಇಂಡೋ ಇಬೇಟಿಯನ್ ಬಾರ್ಡರ್ ಒಂದು ಕಂಪನಿ…ಇದರಲ್ಲಿ 100 ಮಂದಿಯಿದ್ದು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಯೋಜಿಸಲಾಗಿತ್ತು. ಪೂಂಜಾಲಕಟ್ಟೆ, ಗುರುವಾಯನಕೆರೆ, ಚಾರ್ಮಾಡಿ, ಕೊಕ್ಕಡ 4 ಪ್ರದೇಶಗಳನ್ನು ಕೇಂದ್ರವಾಗಿಸಿ 4 ಕಡೆಗಳಲ್ಲಿ ಡಿಎಆರ್ ಕಂಪನಿಗಳನ್ನು ನಿಯೋಜಿಸಲಾಗಿದ್ದು. ಉಜಿರೆಯಲ್ಲಿ ಒಂದು ಕಂಪನಿ (ತುಕಡಿ) ನಿಯೋಜಿಸಲಾಗಿತ್ತು.
ಗಣ್ಯರಿಂದ ಮತದಾನ: ಧರ್ಮಸ್ಥಳದ ಧಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ತಮ್ಮ ಕುಟುಂಬಸ್ಥರೊಂದಿಗೆ ಧರ್ಮಸ್ಥಳ ಮಂಜುನಾಧೇಶ್ವರ ಹಿರಿಯಪ್ರಾಧಮಿಕ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಅವರು ಬೆಳ್ತಂಗಡಿ ಮಾದರಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಕೆ. ಹರೀಶ್ ಕುಮಾರ್ ಬೆಳ್ತಂಗಡಿ ಚರ್ಚ್ ರೋಡ್ ಮತಗಟ್ಟೆ ಸಂಖ್ಯೆ 104 ರಲ್ಲಿ ಮತ ಚಲಾಯಿಸಿದರು. ಶಾಸಕ ಹರೀಶ ಪೂಂಜ ಪಡಂಗಡಿಯ ಗರ್ಡಾಡಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ತನ್ನ ಪತ್ನಿ, ಮಗಳೊಂದಿಗೆ ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಮಂಗಳೂರು ಲೋಕಸಭಾ ಪಕ್ಷೇತರ ಅಭ್ಯರ್ಥಿ ವೆಂಕಟೇಶ್ ಬೆಂಡೆ ಅವರು ಪಿಲ್ಯ ಸಮೀಪದ ನಾವರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲು ಅವರು ತಾಲೂಕಿನ ವಿವಿದೆಡೆ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬೆಳ್ತಂಗಡಿ ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿದರು.