ಪುತ್ತೂರು: ಇಲ್ಲಿನ ನೆಹರೂನಗರ ಕಾರೆಕ್ಕಾಡು ನಿವಾಸಿ ಪುತ್ತೂರು ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ ಆಗಿರುವ ಯುವಕನೋರ್ವ ಸಕಲೇಶಪುರ ತಾಲೂಕಿನ ಬಿಸಲೆಘಾಟಿಂಯಲ್ಲಿ ನೇಣು ಬಿಗಿದ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಅ.12ರಂದು ಸಂಜೆ ವೇಳೆ ಬೆಳಕಿಗೆ ಬಂದಿದೆ.
ನೆಹರೂನಗರ ನಿವಾಸಿಯಾಗಿದ್ದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕುಶಲ ಎಂಬವರ ಪುತ್ರ, ಅದೇ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಮಂತ್ (19) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಸುಮಂತ್ ತನ್ನ ಪಲ್ಸರ್ ಬೈಕ್ನಲ್ಲಿ ಸುಬ್ರಹ್ಮಣ್ಯ ಮಾರ್ಗವಾಗಿ ಬಿಸಲೆ ಘಾಟಿಗೆ ಹೋಗಿ ಅಲ್ಲಿ ಕಾಡಿನಲ್ಲಿ ಹೊಳೆಯ ಬದಿಯಲ್ಲಿ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಕೊಳೆತ್ತಿದ್ದು, ಶವವನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಆ ವ್ಯಾಪ್ತಿಯ ಪೊಲೀಸ್ ಠಾಣೆ ಅಲ್ಲಿಂದ ಸುಮಾರು 35 ಕಿ.ಮೀ ದೂರದ ಸಬ್ಲೂರ್ ಎಂಬಲ್ಲಿರುವ ಹಿನ್ನೆಲೆಯಲ್ಲಿ ಮೃತ ದೇಹವನ್ನು ಪೊಲೀಸ್ ಸಮಕ್ಷಮದಲ್ಲಿ ಶವಪರೀಕ್ಷೆ ಅ.13ರಂದು ಬೆಳಗ್ಗೆ ಮಾಡಲಾಯಿತು. ಪುತ್ತೂರು ಆದರ್ಶ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ದಯಾನಂದ, ಉದಯ, ಮನೇಜರ್ ಮತ್ತು ಸಿಬಂದಿಗಳು ಹಾಗೂ ಮೃತರ ಸಹೋದರ ಘಟನಾ ಸ್ಥಳಕ್ಕೆ ತೆರಳಿದ್ದಾರೆ.
3 ದಿನದಿಂದ ಮನೆಗೂ ಬಾರದ ಸುಮಂತ್
ಸುಮಂತ್ ಅವರು ಸಂಬಳದ ಬೋನಸ್ ಹಣ ಪಡೆದ ಬಳಿಕ ವಾರದಿಂದ ಆಸ್ಪತ್ರೆ ಕೆಲಸಕ್ಕೂ ಬರುತ್ತಿರಲಿಲ್ಲ. ಜೊತೆಗೆ ಕಳೆದ ಮೂರು ದಿನಗಳಿಂದ ಮನೆಗೂ ಬಂದಿಲ್ಲ. ಈ ನಡುವೆ ಅವರ ಮೃತದೇಹ ಬಿಸಲೆ ಘಾಟಿಯಲ್ಲಿ ಪತ್ತೆಯಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಬೈಕ್ ನಂಬರ್ ಮೂಲಕ ಮೃತ ದೇಹ ಗುರುತು ಪತ್ತೆ
ಸುಮಂತ್ ಅವರು ಪಲ್ಸರ್ ಬೈಕ್ನ್ನು ಇತ್ತೀಚೆಗೆ ಸ್ನೇಹಿತರೋರ್ವರಿಂದ ಖರೀದಿ ಮಾಡಿದ್ದರು. ಆದರೆ ಅದನ್ನು ತನ್ನ ಹೆಸರಿಗೆ ಮಾಡದೆ ಬೈಕ್ ಹಿಂದಿನ ಮಾಲಕತ್ವದ ಹೆಸರಿನಲ್ಲಿತ್ತು. ಬಿಸಲೆ ಘಾಟಿಯಲ್ಲಿ ಯುವಕನ ಮೃತ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ತುಸು ದೂರದಲ್ಲಿರುವ ಬೈಕ್ನ ನಂಬರ್ ಆಧಾರದಲ್ಲಿ ಅಲ್ಲಿನ ಸ್ಥಳೀಯರು ಬೈಕ್ ಖರೀದಿ ಮಾಡಿದ ಪುತ್ತೂರು ಶೋ ರೂಮ್ನ್ನು ಸಂಪರ್ಕಿಸಿದರು. ಶೋ ರೂಮ್ನವರು ಸುಮಂತ್ ಕೆಲಸ ನಿರ್ವಹಿಸುತ್ತಿದ್ದ ಆದರ್ಶ ಆಸ್ಪತ್ರೆಗೆ ಬಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.