ಪುತ್ತೂರು: ಇಲ್ಲಿನ ಸರಕಾರಿ ಆಸ್ಪತ್ರೆಯ ರಸ್ತೆಯಲ್ಲಿರುವ ಚಿಣ್ಣರ ಪಾರ್ಕ್ನ ರಂಗಮಂದಿರ ವೇದಿಕೆಯಲ್ಲಿ ಅಕ್ಕಸಾಲಿಗರೋರ್ವರ ಶವ ಪತ್ತೆಯಾದ ಘಟನೆ ಸೆ.4ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಸವಣೂರು ಪುಣ್ಚಪ್ಪಾಡಿಯ ಕಲಾಯಿತ್ತಡ್ಕ ದಿ. ನಾರಾಯಣ ಮತ್ತು ದಿ.ಸತ್ಯವತಿ ಎಂಬವರ ಪುತ್ರ ಸುಧಾಕರ ಆಚಾರ್ಯ(35) ಅವರು ಮೃತಪಟ್ಟವರು. ಸುಧಾಕರ್ ಆಚಾರ್ಯರವರು ಹಲವು ವರ್ಷಗಳ ಹಿಂದೆ ಕೋರ್ಟು ರಸ್ತೆಯಲ್ಲಿನ ಕಟ್ಟಡವೊಂದರಲ್ಲಿ ಅಕ್ಕಸಾಲಿಗನಾಗಿ ಚಿನ್ನದ ಕಸೂತಿ ಕೆಲಸ ಮಾಡುತ್ತಿದ್ದು, ಬಳಿಕದ ದಿನಗಳಲ್ಲಿ ಆತನ ತಂದೆ ತಾಯಿ ಮೃತಪಟ್ಟ ಬಳಿಕ ಚಿನ್ನದ ಕಸೂತಿಯ ವೃತ್ತಿಯನ್ನು ಬಿಟ್ಟು ಮದ್ಯವ್ಯಸನಿಯಾಗಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸರಿಯಾಗಿ ಮನೆಗೆ ಹೋಗುತ್ತಿರಲಿಲ್ಲ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಅತಿಯಾದ ಮದ್ಯಸೇವನೆಯಿಂದಾಗಿ ಅವರು ಮೃತಪಟ್ಟಿರಬಹುದೆಂದು ಮೃತರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದು ತೆರಳಿದ್ದಾರೆ. ಮೃತ ದೇಹವನ್ನು ಮೃತ ಸುಧಾಕರ್ ಆಚಾರ್ಯರವರ ದೊಡ್ಡಪ್ಪ ವೀರಪ್ಪ ಆಚಾರ್ಯ ಮತ್ತು ಸಬಂಧಿಕರು ಇಲ್ಲಿನ ಚಿಕ್ಕಪುತ್ತೂರಿನಲ್ಲಿರುವ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಿದ್ದಾರೆ.