ಪುತ್ತೂರು: ಕೇಂದ್ರ ಸರಕಾರ ತರಲಿಚ್ಚಿಸಿರುವ ಕಾಯಿದೆಗಳಾದ ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ 2017/18 ಮತ್ತು ಗ್ರಾಹಕ ರಕ್ಷಣೆ ಮಸೂದೆ 2018 ಇದರಲ್ಲಿ ಅನೇಕ ತಿದ್ದುಪಡಿಗಳ ಕುರಿತು ಸರಕಾರಕ್ಕೆ ಮನವಿ ಮಾಡಿದ್ದರೂ ಅದನ್ನು ತಿದ್ದುಪಡಿ ಮಾಡದೆ ಇರುವುದು ವೈದ್ಯರುಗಳಿಗೆ ನೋವಿನ ಸಂಗತಿಯಾಗಿದ್ದು, ಕಾಯ್ದೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಕೈಗೆ ಕಪ್ಪು ಪಟ್ಟಿ ಧರಿಸಿ ಆರೋಗ್ಯ ಕ್ಷೇತ್ರಕ್ಕೆ ತೊಂದರೆ ಆಗದಂತೆ ಮೌನವಾಗಿ ಕರ್ತವ್ಯ ನಿರ್ವಹಿಸಿ ನೋವಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಪ್ರತಿಭಟನೆಯ ಕುರಿತು ಮತ್ತು ಕಾಯ್ದೆಯಲ್ಲಿನ ನ್ಯೂನ್ಯತೆಗಳನ್ನು ಪರಿಶೀಲಿಸುವ ಕುರಿತು ಮತ್ತು ಸಹಾಯಕ ಕಮೀಷನರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಾಜೆಯವರು, ಮಸೂದೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸುತ್ತಿದ್ದು. ಇದನ್ನು ಅಖಿಲ ಭಾರತ ವಿರೋಧ ದಿನವನ್ನಾಗಿ ಆಚರಿಸುತ್ತಿದ್ದೇವೆ. ದೇಶದಲ್ಲಿ 8.4 ಲಕ್ಷ ಸದಸ್ಯರನ್ನು ಒಳಗೊಂಡ ಆಲೋಪತಿ ವೈದ್ಯರು ಭಾರತೀಯ ವೈದ್ಯಕೀಯ ಸಂಘದ ಸದಸ್ಯರಾಗಿದ್ದು, ಅವರೆಲ್ಲಾ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ನಮ್ಮ ಪ್ರತಿಭಟನೆ ಯಾಕೆ ಎಂಬ ಮತ್ತು ಕಾಯ್ದೆಗಳಲ್ಲಿರುವ ಸಮಸ್ಯೆಗಳ ಕುರಿತು ಪ್ರತಿ ಶಾಖೆಯಲ್ಲಿ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ. ಶಾಸಕ, ಸಂಸದರು, ಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದು, ತಮ್ಮ ತಮ್ಮ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಾಗ ಕೈಗೆ ಅಥವಾ ಹೆಗಲಿಗೆ ಕಪ್ಪು ಪಟ್ಟಿ ಧರಿಸಿ ಸೇವೆ ನೀಡುತ್ತಿದ್ದೇವೆ. ಪ್ರತಿಭಟನೆ ಮೌನವಾಗಿ ದುಖಃದಿಂದ ನಡೆಯುತ್ತಿದೆ ಎಂದರು.
ಪ್ರಸ್ತಾವಿತ ನ್ಯಾಷನಲ್ ಕಮೀಷನ್ ಮಸೂದೆ ಪ್ರಜಾಪ್ರಭುತ್ವ ವಿರೋಧಿ, ಒಕ್ಕೂಟ ವ್ಯವಸ್ಥೆಗೆ ವಿರೋಧಿ, ಬಡವರ ವಿರುದ್ಧವಾಗಿದ್ದು, ಶ್ರೀಮಂತರ ಪರವಾಗಿದೆ. ಪ್ರಾಧಿಕಾರ ಮತ್ತು ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರಿಕರಿಸುವ ಒಳ ಸಂಚನ್ನು ಹೊಂದಿದೆ. ಆಡಳಿತವನ್ನು ಸಂಪೂರ್ಣವಾಗಿ ಕೇಂದ್ರ ಸರಕಾರದ ಅಧೀನಕ್ಕೆ ತೆಗೆದು ಕೊಳ್ಳುವ ಹುನ್ನಾರವನ್ನು ಹೊಂದಿದೆ. ಭಾರತೀಯ ವೈದ್ಯಕೀಯ ಪರಿಷತ್ತನ್ನು ವಿಸರ್ಜಿಸಿ ಸರಕಾರದ ಅಧೀನದಲ್ಲಿ ಅದನ್ನು ನಡೆಸುವುದಕ್ಕೆ ಭಾರತೀಯ ವೈದ್ಯಕೀಯ ಸಂಘದ ವಿರೋಧವಿದೆ ಎಂದರು.
ಗ್ರಾಹಕ ಹಿರರಕ್ಷಣಾ ಮಸೂದೆಯ ತಿದ್ದುಪಡಿಯಲ್ಲಿ ನ್ಯೂನ್ಯತೆಗಳು
ಪುತ್ತೂರು ಹಾಸ್ಪಿಟಲ್ ಅಸೋಸಿಯೇಶನ್ನ ಅಧ್ಯಕ್ಷರೂ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಪತಿ ರಾವ್ರವರು ಮಾತನಾಡಿ, 1986ರಲ್ಲಿ ಸಂಸತ್ ಸಭೆಯಲ್ಲಿ ಮಂಡಿಸಲಾದ ಗ್ರಾಹಕ ಹಿತರಕ್ಷಣಾ ಮಸೂದೆಯಲ್ಲಿ ವೈದ್ಯಕೀಯ ವೃತ್ತಿಯು ಒಳಗೊಂಡಿರಲಿಲ್ಲ. 1994ರಲ್ಲಿ ವೈದ್ಯಕೀಯ ವೃತ್ತಿಯನ್ನು ಸೇರ್ಪಡೆಗೊಳಿಸಲಾಯಿತು. ಇದೀಗ 2018ರ ಡಿ.20ರಂದು ಅನುಮೋದಿಸಿದ ತಿದ್ದುಪಡಿಗಗಳು ದೇಶದ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದೆ ಎಂದ ಅವರು ಮಸೂದೆ ತಿದ್ದುಪಡಿಯಲ್ಲಿ ಜಿಲ್ಲಾ ಗ್ರಾಹಕ ಹಿತರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು ರೂ. 10 ಲಕ್ಷದಿಂದ ರೂ. 1 ಕೋಟಿಗೆ ಏರಿಸಲಾಗಿದೆ. ರಾಜ್ಯ ಗ್ರಾಹಕ ಹಿತಗರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು ರೂ. 1 ಕೋಟಿಯಿಂದ ರೂ. 10 ಕೋಟಿಗೆ ಏರಿಸಲಾಗಿದೆ. ಈ ತಿದ್ದುಪಡಿಯಿಂದಾಗಿ ಗ್ರಾಹಕ ಹಿತರಕ್ಷಣಾ ವೇದಿಕೆಯಲ್ಲಿ ನ್ಯಾಯಧೀಶರ ಸದಸ್ಯತ್ವ ಕಡ್ಡಾಯ ಇಲ್ಲ. ತೊಂದರೆಗೊಳಾದವರು ಮಾತ್ರವಲ್ಲದೆ ಘಟನೆಗೆ ಸಂಬಂಧವಿಲ್ಲದ ಇತರ ಸಂಘಟನೆಗಳಿಗೂ ಕೂಡಾ ದೂರು ಸಲ್ಲಿಸಲು ಅವಕಾಶವಿದೆ. ಇದು ಸುಳ್ಳು ದೂರುಗಳಿಗೆ ಕಾರಣವಾಗುತ್ತದೆ. ಮಧ್ಯವರ್ತಿ ಘಟಕಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಪರಿಣಿತ ವೈದ್ಯಕೀಯ ಅಭಿಪ್ರಾಯ ಪಡೆಯದೆ ತೀರ್ಮಾಣ ಕೈಗೊಳ್ಳುವ ಅವಕಾಶದಿಂದಾಗಿ ಅನೇಕ ತೊಂದರೆಗಳು ಉಂಟಾಗಲಿವೆ ಎಂದು ಹೇಳಿದರು.