ಬೆಳ್ತಂಗಡಿ: ನೋಟ್ ಬ್ಯಾನ್ನಿಂದ ಕಾಂಗ್ರೆಸ್ ಪಕ್ಷ ದೀವಾಳಿಯಾಗಿದೆಯೇ ಹೊರತು ಜನಸಾಮಾನ್ಯರಿಗೇನೂ ಇದರಿಂದ ತೊಂದರೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತದಿಂದಾಗಿ ದೇಶದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಭಾಗ ಸಹ ಪ್ರಭಾರಿ ಪ್ರತಾಪಸಿಂಹ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ನೋಟು ಅಮಾನ್ಯೀಕರಣದಿಂದಾಗಿ ಕಪ್ಪು ಹಣ ಹೊಂದಿದವರಿಗೆ ಭ್ರಷ್ಟಾಚಾರಿಗಳಿಗೆ, ಭಯೋತ್ಪಾದಕರಿಗೆ, ಅಪಾರ ತೊಂದರೆ, ನಡುಕ ಉಂಟಾಗಿದ್ದೇ ಹೊರತು ಜನಸಾಮಾನ್ಯರಿಗಲ್ಲ. ಜನಸಾಮಾನ್ಯರು ನಿರಾಳವಾಗಿರುವುದು ಈಗಾಗಲೇ ಸರ್ವವಿದಿತ. ದೇಶದಲ್ಲೆಡೆ ಕಾಂಗ್ರೆಸ್ನ ಪ್ರಭಾವ ಕಡಿಮೆಯಾಗುತ್ತಿರುವುದು ಕಾಂಗ್ರೆಸ್ನವರಲ್ಲಿ ಹತಾಶೆಯ ಮನೋಭಾವ ಮೂಡಿಸುತ್ತಿದೆ. ಗಾಂಧಿಯ ಹೆಸರಿನಲ್ಲಿ ಕುಟುಂಬ ರಾಜಕೀಯಕ್ಕೆ ಅಂಟಿಕೊಂಡಿರುವ ಕಾಂಗ್ರೆಸ್ ನಾಯಕತ್ವ ಬೌದ್ಧಿಕ ದಿವಾಳಿತನಕ್ಕೆ ಒಳಗಾಗಿದೆ. ಮಾತ್ರವಲ್ಲದೆ ಅದು ನೋಟು ಅಮಾನ್ಯತೆಯ ಕಾರಣ ಆರ್ಥಿಕ ಸಂಕಟ ಅನುಭವಿಸುತ್ತಿದೆ.
ಅಸ್ತಿತ್ವಕ್ಕಾಗಿ ಆತ್ಮಾಭಿಮಾನವನ್ನು ಬಿಟ್ಟು ಸಣ್ಣ ಪಕ್ಷಗಳೊಂದಿಗೆ ಸೇರಿಕೊಂಡು ಮಾಡುತ್ತಿರುವ ಅವಕಾಶವಾದಿ ರಾಜಕಾರಣ ನೋಡಿದರೆ ಕಾಂಗ್ರೆಸ್ ಪಕ್ಷವು ಕಣ್ಮರೆಯಾಗುವ ದಿನ ದೂರವಿಲ್ಲ. ದೀಪ ಆರುವ ಮುನ್ನ ಒಮ್ಮೆಲೆ ಜ್ವಾಲೆ ಎದ್ದು ಹೇಗೆ ನಂದಿ ಹೋಗುತ್ತದೆಯೋ ಅದೇ ರೀತಿ ಕಾಂಗ್ರೆಸ್ನ ಸ್ಥಿತಿ ಆಗಿದೆ.
ಪ್ರಧಾನಿ ಮೋದಿಯವರ ಬಿಗಿಯಾದ ಆಡಳಿತ ನೀತಿಯಿಂದಾಗಿ ದೇಶದ ಆರ್ಥಿಕತೆ ಏರು ದಾರಿಯಲ್ಲಿ ಸಾಗುತ್ತಿದೆ ಮತ್ತು ಬಲವಾಗುತ್ತಿದೆ. ವಿವಿಧ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಸೂಚ್ಯಂಕಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ದೇಶದ ಆರ್ಥಿಕತೆಯನ್ನು ಸುದೃಢಗೊಳಿಸುವ ದೂರಗಾಮಿ ಪರಿಣಾಮದ ಕಠಿಣ ನಿರ್ಣಯಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಕಾರಣಗಳಿಗಾಗಿ ಪ್ರಧಾನಿ ಮೋದಿಯವರು ಪಡೆಯುತ್ತಿರುವ ಜನ ಮನ್ನಣೆ ಕಾಂಗ್ರೆಸ್ನವರಲ್ಲಿ ಹತಾಶೆಯ ಮನೋಭಾವ ಮೂಡಿಸಿದೆ.
ಹಿಂದುತ್ವವನ್ನು ಕಡೆಗಣಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಈಚೆಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಜನಿವಾರ ಹಾಕಿಕೊಂಡು ದೇವಸ್ಥಾನಗಳಿಗೆ ಅಲೆದಾಡುವಂತಾಗಿದೆ. ರಾಮನೇ ಇಲ್ಲ ಎನ್ನುತ್ತಿದ್ದವರಿಗೆ ಇದೀಗ ಏನಾಗಿದೆ? ಪ್ರಧಾನಿ ಮೋದಿ ಕಾರ್ಯವೈಖರಿಯಿಂದಾಗಿ ಇದೀಗ ಕಾಂಗ್ರೆಸ್ ಪಕ್ಷವೂ ದೇವಸ್ಥಾನಗಳತ್ತ ಮುಖ ಮಾಡತೊಡಗಿದೆ. ಅಯೋಧ್ಯೆಯಲ್ಲಿ ಮಂದಿರ ಆಗಿಯೇ ಆಗುತ್ತದೆ. ಇದು ದೇಶದ ಜನರ ಅಸ್ಮಿತೆಯ ಪ್ರಶ್ನೆ. ಕಾಂಗ್ರೆಸ್ ಪಕ್ಷಕ್ಕೆ ಬಾಬರ್ ಬೇಕೋ ಶ್ರೀರಾಮ ಬೇಕೋ, ಶ್ರೀಕೃಷ್ಣದೇವರಾಯ ಮುಖ್ಯವೋ ಟಿಪ್ಪು ಮುಖ್ಯವೋ ಎಂಬುದನ್ನು ಅವರು ಜನತೆಯ ಮುಂದೆ ಸ್ಪಷ್ಟಪಡಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.