ಬಂಟ್ವಾಳ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕರ್ನಾಟಕ ಜನತಾ ಪಾರ್ಟಿ ಖಾತೆ ತೆರೆಯಲಿದೆ ಎಂದು ಕೆಜೆಪಿ ಪಕ್ಷದ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಬೆಂಗಳೂರು ಹೇಳಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ.ರೊಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪುತ್ತೂರು ಹಾಗೂ ಸುಳ್ಯ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಗೆಲ್ಲುವ ಭರವಸೆಯಿದೆ. ಇಲ್ಲಿರುವ ಸಂಘಟನೆಯ ಪ್ರಮುಖ ನಾಯಕರನ್ನು ಸೇರಿಸಿ ಪಕ್ಷವನ್ನು ಬಲಪಡಿಸುವ ಕಾರ್ಯ ನಡೆಸಲಾಗುವುದು. ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರಿದ್ದು, ಜ. 6ರಂದು ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕೆಜೆಪಿ ಇಲ್ಲದೆ ಯಾರೂ ಆಡಳಿತ ನಡೆಸುವ ಹಾಗಿಲ್ಲ. ಎಲ್ಲ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಲಿಸುವ ಬಗ್ಗೆ ಪಕ್ಷ ತೀರ್ಮಾನ ಮಾಡಿದೆ. ಅಲ್ಲದೆ ಕೆಲವೊಂದು ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಯಾರೂ ಬಹುಮತ ಪಡೆಯಲು ಸಾಧ್ಯವಿಲ್ಲ. ನಾವು ಕನಿಷ್ಠ 80 ಕಡೆಗಳಲ್ಲಿ ಜಯಶಾಲಿಯಾಗುತ್ತೇವೆ. ನಾವು ಯಾರ ಜೊತೆಯಲ್ಲೂ ಸೇರಲ್ಲ, ಉಳಿದ ಪಕ್ಷ ನಮ್ಮ ಜೊತೆ ಬರುವ ಸ್ಥಿತಿ ನಿರ್ಮಾಣವಾಗುತ್ತದೆ ಕಾದು ನೋಡಿ ಎಂದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್ ಗಿಂತ ಹೆಚ್ಚಾಗಿ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೂ ಹೌದು ಎಂದು ಅವರು ದೂರಿದರು.
ಕರಾವಳಿ ಗಲಭೆಗೆ ಬಿಜೆಪಿ ನಾಯಕರು ಕಾರಣ
ಕರಾವಳಿ ಭಾಗದಲ್ಲಿ ಗಲಭೆಗಳು ನಡೆಯಲು ಬಿಜೆಪಿ ನಾಯಕರು ಮತ್ತು ಕರಾವಳಿ ಭಾಗದ ಸಂಸದರು ಪ್ರಮುಖ ಕಾರಣ. ಗುಜರಾತ್ ಚುನಾವಣೆ ಬಳಿಕ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಬಿಜೆಪಿ ಗಲಭೆಯ ಸಂಚು ರೂಪಿಸುತ್ತಿವೆ ಎಂದು ಆರೋಪಿಸಿದ ಅವರು, ಎಲ್ಲ ಕೋಮಿನ ಜನರು ಇಲ್ಲಿ ಐಕ್ಯತೆಯಲ್ಲಿದ್ದು, ಬಿಜೆಪಿಯು ಮನಷ್ಯರ ನಡುವೆ ಒಡೆದು ಆಳುವ ನೀತಿಯನ್ನು ಕೈಗೊಂಡಿದೆ. ಇದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಪ್ರಕಾಶ್ ಬಾಬು ಇದ್ದರು.