ಮೂಡುಬಿದಿರೆ: ಮದುವೆಗೆ ಎರಡು ದಿನಗಳಿರುವಾಗಲೇ ದರೆಗುಡ್ಡೆಯಿಂದ ನಾಪತ್ತೆಯಾಗಿರುವ ಪ್ರಿಯಾಂಕ ಮನೆಗೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಭಾನುವಾರ ಸಾಯಂಕಾಲ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ನಿಧಾನಗತಿಯಲ್ಲಿ ತನಿಖೆಯನ್ನು ನಡೆಸುತ್ತಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಮುಂದಿನ 7 ದಿನಗಳೊಳಗೆ ನಾಪತ್ತೆಯಾಗಿರುವ ಯುವತಿಯನ್ನು ಪತ್ತೆ ಮಾಡಿ ಮನೆಯವರ ಎದುರು ತಂದು ನಿಲ್ಲಿಸದಿದ್ದರೆ ತೀವ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ನಾಪತ್ತೆಯಾಗಿ 10 ದಿನ ಕಳೆದರೂ ಈವರೆಗೂ ಪ್ರಿಯಾಂಕಳ ಬಗ್ಗೆ ಸುಳಿವು ಸಿಕ್ಕಿಲ್ಲ. ಆಕೆಯನ್ನು ವ್ಯವಸ್ಥಿತ ರೀತಿಯಲ್ಲಿ ಅಪಹರಿಸಲಾಗಿದೆ.
ಪೊಲೀಸ್ ಇಲಾಖೆಯಿಂದಲೂ ಯಾವುದೇ ಮಾಹಿತಿಗಳು ಲಭಿಸಿಲ್ಲ. ಹೈದರ್ ಎಂಬಾತ ಆಕೆಯನ್ನು ಕಿಡ್ನಾಪ್ ಮಾಡಿದ್ದಾನೆಂದು ಸುಳಿವು ನೀಡಿದರೂ ಆತನ ಮನೆಗೆ ಪೊಲೀಸರು ಒಂದು ಸಲ ಮಾತ್ರ ಹೋಗಿದ್ದು ಕಾಟಾಚಾರಕ್ಕೆಂಬಂತೆ ತನಿಖೆ ನಡೆಸಿದ್ದಾರೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ವಾಮೀಜಿಯ ಗಮನಕ್ಕೆ ತಂದರು. ಈ ನಾಪತ್ತೆ ಪ್ರಕರಣವು ವ್ಯವಸ್ಥಿತ ರೀತಿಯಲ್ಲಿ ನಡೆದಿರಬಹುದು. ಇದಕ್ಕೆ ಪಿಎಫ್ಐ, ಕೆಎಫ್ಡಿಯಂತಹ ಸಂಘಟನೆಗಳು ಸೇರಿಕೊಂಡು ವ್ಯವಸ್ಥಿತ ಜಾಲವನ್ನು ರೂಪಿಸಿ ಪ್ರಿಯಾಂಕಳನ್ನು ಅದರಲ್ಲಿ ಸಿಲುಕಿಸಿದ್ದಾರೆ. ಆದರೆ ಆಕೆಗೆ ಈ ಬಗ್ಗೆ ಊಹೆ ಇರಲಿಲ್ಲ ಇದ್ದಿದ್ದರೆ ಆಕೆ ಹೇಳುತ್ತಿದ್ದಳು. ಅಲ್ಲದೆ ಆಕೆಯ ಹೆಸರಿನಲ್ಲಿ ಪತ್ರವು ಮನೆಗೆ ಬಂದಿದ್ದರೂ ವಿಳಾಸ ಬದಲಾವಣೆಯಾಗಿದೆ ಮತ್ತು ಆಕೆಯ ಬರವಣಿಗೆಯೂ ಅಲ್ಲವೆಂದಾದರೆ ಆಕೆಯು ಈ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಳೆ ದ್ದರಿಂದ ಈ ಜಾಲವನ್ನು ಬೇಧಿಸಬೇಕಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಪ್ರಸ್ತುತ ಸ್ಥಿತಿಯಲ್ಲಿ ಸಂಘಟನೆಗಳು, ಮಾತೃಸಂಘಗಳು ಇಂತಹ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ವ್ಯವಸ್ಥಿತವಾದ ಜಾಲಗಳನ್ನು ರೂಪಿಸಿ ಕಾರ್ಯಚರಣೆ ನಡೆಸಿ ಜಾಗೃತಗೊಳಿಸಬೇಕಾಗಿದೆ. ಈ ಬಗ್ಗೆ ಶೀಘ್ರ ತನಿಖೆಗೆಗಾಗಿ ಪೊಲೀಸ್ ವರಿಷ್ಠಾಧಿಕಾರಿ, ದ.ಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಕಾರ್ಯ ಪ್ರವೃತ್ತರಾಗುವಂತೆ ಮನವಿ ಮಾಡಲಾಗುವುದು ಎಂದ ಸ್ವಾಮೀಜಿ ನಾವು ಮತ್ತು ನಮ್ಮ ಹಿಂದೂ ಸಂಘಟನೆಗಳು ನಿಮ್ಮ ಜೊತೆಗಿದ್ದಾವೆ ನೀವು ಧೈರ್ಯದಿಂದಿರಿ” ಎಂದು ಪ್ರಿಯಾಂಕಳ ಹೆತ್ತವರಿಗೆ ಧೈರ್ಯ ತುಂಬಿದರು.
ಹಿಂದೂ ಸಂಘಟನೆಗಳ ಪ್ರಮುಖರಾದ ಸಮಿತ್ ರಾಜ್ ದರೆಗುಡ್ಡೆ, ರಾಜೇಶ್ ಸುವರ್ಣ, ವಿನೋಧರ್, ಶ್ರೀನಾಥ್ ಸುವರ್ಣ, ಅಶೋಕ್ ಶೆಟ್ಟಿ, ಶರತ್ ಶೆಟ್ಟಿ, ಸಂದೀಪ್ ಸುವರ್ಣ, ಚಿತ್ತರಂಜನ್ ಕೋಟ್ಯಾನ್, ಪ್ರಸಾದ್ ಬಿ. ಪೂಜಾರಿ, ಅಭಿಲಾಷ್, ಸಂತೋಷ್, ಹರೀಶ್, ಭಂಡಾರಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪ್ರಕಾಶ್ ಭಂಡಾರಿ, ಸಂಘಟನಾ ಕಾರ್ಯದರ್ಶಿ ಪ್ರಸಾದ್, ಸದಸ್ಯ ಸುರೇಶ್ ಭಂಡಾರಿ, ಪ್ರಿಯಾಂಕ ಮನೆಯ ಸದಸ್ಯರು ಉಪಸ್ಥಿತರಿದ್ದರು.