ಪುತ್ತೂರು: ಒಂದು ವಾರದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಕಾಡಿನಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ.
ಮಾಡ್ನೂರು ಗ್ರಾಮದ ಮದ್ಲ ಪಟ್ಟುಮೂಲೆ ನಿವಾಸಿ ಕತ್ತರಿಸಾಣೆ ಕಾಯಕ ಮಾಡುತ್ತಿದ್ದ ಸುಂದರ ಮೂಲ್ಯರವರು ನ.24ರಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ವಿನೋದ್ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪೊಲೀಸರು, ಮನೆಯವರು ಸೇರಿದಂತೆ ಊರಿನ ಸ್ಥಳೀಯರು ಕೂಡ ಹುಡುಕಾಟ ಆರಂಭಿಸಿದ್ದರು. ನಾಪತ್ತೆಯಾಗಿ ಒಂದು ವಾರವಾಗುತ್ತ ಬಂದರೂ ನಾಪತ್ತೆಯಾದವರ ಸುಳಿವು ಪತ್ತೆಯಾಗಿರಲಿಲ್ಲ.
ಕಾಡಿನಲ್ಲಿ ಮೃತದೇಹ ಪತ್ತೆ
ನಾಪತ್ತೆಯಾಗಿದ್ದ ಸುಂದರ ಮೂಲ್ಯರವರ ಮೃತದೇಹವು ಮಾಡ್ನೂರು ಗ್ರಾಮದ ಮಂಗಳ ಕಲ್ಲು ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಂದರ ಮೂಲ್ಯರವರ ಸಹೋದರನ ಮಗ ಸುರೇಶ್ ಮತ್ತು ಇಬ್ಬರು ಯುವಕರು ಸಂಜೆಯ ವೇಳೆಯಲ್ಲಿ ನನ್ಯ ನಿಧಿಮುಂಡ ಮಾರ್ಗವಾಗಿ ಪಾಪೆಮಜಲು ಕಡೆ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಮಂಗಳಕಲ್ಲಿನ ಕಾಡಿನ ಸಮೀಪದಲ್ಲಿ ವಿಪರೀತ ವಾಸನೆ ಬರುತ್ತಿರುವುದನ್ನು ಗಮನಿಸಿ ಏನೆಂಬುದಾಗಿ ತಿಳಿಯಲು ಮುಂದೆ ಸಾಗಿದಾಗ ಕಾಡಿನಲ್ಲಿ ಮರವೊಂದರಲ್ಲಿ ಮೃತದೇಹ ಪತ್ತೆಯಾಯಿತು. ವಿಷಯ ತಿಳಿದ ಯುವಕರು ಸ್ಥಳೀಯರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರು.