ಪುತ್ತೂರು: ಉಪ್ಪಿನಂಗಡಿ ರಸ್ತೆಯ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ಎಂಬಲ್ಲಿ ಗುತ್ತಿಗೆದಾರರೋರ್ವರ ಮನೆಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾದ ಘಟನೆ ಅ.5ರಂದು ಸಂಜೆ ಬೆಳಕಿಗೆ ಬಂದಿದ್ದು, ಘಟನೆಯ ಕುರಿತು ಮನೆ ಮಂದಿ ಅ.6ರಂದು ದೂರು ನೀಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗುತ್ತಿಗೆದಾರಾಗಿರುವ ಡಿ.ಕೆ.ಅಶ್ರಫ್ ಅವರ ಮನೆಯಿಂದ ರೂ. 2.20 ಲಕ್ಷ ನಗದು ಕಳವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಈ ಘಟನೆ ನಡೆದಿದೆ.
ಕಳ್ಳರು ಮನೆಯ ಹಿಂಬದಿ ಶೌಚಾಲಯದ ವೆಂಟಿಲೇಟರ್ ನ ಕಬ್ಬಿಣದ ಸರಳನ್ನು ಬೆಂಡ್ ಮಾಡಿ ಒಳನುಗ್ಗಿ ಕಪಾಟಿನಲ್ಲಿದ್ದ ರೂ. 2.20ಲಕ್ಷ ನಗದು ಕಳವು ಮಾಡಿದ್ದಾರೆ.
ವೆಂಟಿಲೇಟರ್ ಮೂಲಕ ಮನೆಯೊಳಗೆ ಪ್ರವೇಶಿಸಿದ ಕಳ್ಳರು: ಡಿ.ಕೆ.ಅಶ್ರಫ್ ಅವರು ಅ.2ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಮನೆ ಮಂದಿ ಸಮೇತ ಮಾವನ ಮನೆ ಸಾಲೆತ್ತೂರಿಗೆ ಹೋಗಿದ್ದರು. ಅ.5ರಂದು ಸಂಜೆ ಮನೆಗೆ ಹಿಂದಿರುಗಿದಾಗ ಮನೆಯ ಒಳಗಿದ್ದ ಬಟ್ಟೆ ಬರೆಗಳು ಮತ್ತು ಇತರ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸಾಲೆತ್ತೂರಿಗೆ ಹೋಗುವ ಸಮಯ ತನ್ನ ಕೆಲಸದವರಿಗೆ ಸಂಬಳ ಕೊಡಲು ಬ್ಯಾಂಕ್ನಿಂದ ರೂ. 2.20 ಲಕ್ಷ ನಗದೀಕರಿಸಿ ಮನೆಯ ಮರದ ಕಪಾಟಿನಲ್ಲಿ ಬಟ್ಟೆಯೊಂದರಲ್ಲಿ ಇಟ್ಟಿದ್ದ ಹಣದ ಕಳವಾಗಿರುವುದು ಬೆಳಕಿಗೆ ಬಂದಿದೆ.
ಆದರೆ ಮನೆಯ ಎದುರು ಬಾಗಿಲಿಗೆ ಯಾವುದೇ ಹಾನಿಯಾಗದಿರುವುದನ್ನು ಗಮನಿಸಿ ಮನೆಯೊಳಗೆ ಸ್ನಾನಗೃಹ ಶೌಚಾಲಯಕ್ಕೆ ಹೋಗಿ ನೋಡಿದಾಗ ಶೌಚಾಲಯದಲ್ಲಿನ ವೆಂಟಿಲೇಟರ್ ಕಬ್ಬಿಣ ಬೆಂಡ್ ಆಗಿತ್ತು. ಕಳ್ಳರು ಅದರ ಮೂಲಕವೇ ಮನೆಯೊಳಗೆ ಪ್ರವೇಶ ಮಾಡಿ ಕಳವು ಮಾಡಿದ್ದಾರೆ.