ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ಬಳಿಯ ತೆಂಕಿಲ ದರ್ಖಾಸ್ ಗುಡ್ಡದಲ್ಲಿ ಕಾಣಿಸಿಕೊಂಡ ಬಿರುಕಿಗೆ ಸಂಬಂಧಿಸಿ ಅಪಾಯದ ವಲಯ ಎಂದು ಹೆಸರಿಸಲಾಗಿದೆ. ಆದರೆ ಇಲ್ಲಿ ಯಾವುದೇ ಉನ್ನತ ಮಟ್ಟದ ಪರಿಶೀಲನೆ ನಡೆಯಲಿಲ್ಲ.
ಇಲ್ಲಿಗೆ ಬಂದ ಕೆಲವರು ಗುಡ್ಡದಲ್ಲಿ ವಾಸ್ತವ್ಯ ಅಪಾಯಕಾರಿ ಎಂದು ಹೇಳಿದರೆ ಇನ್ನು ಕೆಲವರು ಇಲ್ಲಿ ಯಾವುದೇ ಅಪಾಯ ಇಲ್ಲವೆಂದು ಹೇಳಿಕೆ ನೀಡುವ ಮೂಲಕ ನಮ್ಮನ್ನು ಗೊಂದಲಕ್ಕೀಡು ಮಾಡಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಉನ್ನತ ಮಟ್ಟದ ಪರಿಶೀಲನೆ ನಡೆಸಬೇಕೆಂದು ಸಂತ್ರಸ್ತರು ಮತ್ತು ಗುಡ್ಡದ ತಳಭಾಗದ ನಿವಾಸಿಗಳು ಆಗ್ರಹಿಸಿದ್ದಾರೆ.
ಗುಡ್ಡ ಬಿರುಕು ಬಿಟ್ಟ ಹಿನ್ನಲೆಯಲ್ಲಿ ಸ್ಥಳಾಂತರ ಗೊಂಡ 12 ಕುಟುಂಬದ ಸಂತ್ರಸ್ತರು ಮತ್ತು ಗುಡ್ಡದ ತಳ ಭಾಗದಲ್ಲಿರುವ ನಿವಾಸಿಗಳು ಸೇರಿಕೊಂಡು ಸ್ಥಳೀಯ ಕೇಶವ ನಾೈಕ್ ಎಂಬವರ ಮನೆಯಲ್ಲಿ ಆ.28ರಂದು ಸಂಜೆ ಸಭೆ ನಡೆಸಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಲು ನಿರ್ಧಾರ ಕೈಗೊಂಡಿದ್ದಾರೆ.
ಭೂವಿಜ್ಞಾನ ಇಲಾಖೆಯು ಸೇರಿದಂತೆ ಹಲವಾರು ತಂಡಗಳು ಈ ಗುಡ್ಡಕ್ಕೆ ಭೇಟಿ ನೀಡಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಗುಡ್ಡದ ಮೇಲಿರುವ ಹಾಗೂ ಗುಡ್ಡದ ತಪ್ಪಲಿನಲ್ಲಿರುವ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಆತಂಕಕ್ಕೆ ಈಡಾಗಿವೆ. ಆದ್ದರಿಂದ ಭೂವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಯಾವುದೆ ಉಪಕರಣ ಇಲ್ಲದೆ ತೋರಿಕೆಗಾಗಿ ಬಂದು ಪರಿಶೀಲನೆ ಮಾಡುವುದು ಬೇಡ. ಬರುವಂತ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಈ ನಿಟ್ಟಿನಲ್ಲಿ ಭೂ ವಿಜ್ಞಾನ ವಿಭಾಗ ಮಂಗಳೂರು ಇಲ್ಲಿನ ಸೂಕ್ತ ತನಿಖೆ ನಡೆಸಿ ನಿಖರ ಮಾಹಿತಿ ಒದಗಿಸಿ ಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೆಸಿಡಿಸಿ ಇಂಗುಗುಂಡಿ, ಡೈನಾಮೈಟ್ ಬಾಂಬ್ ಕಾರಣ: ಈ ತೆಂಕಿಲ ದರ್ಖಾಸ್ ಗುಡ್ಡದ ಮೇಲೆ ಕೆಸಿಡಿಸಿಗೆ ಸಂಬಂಧಿಸಿದ ನೂರಾರು ಎಕರೆ ಪ್ರದೇಶದಲ್ಲಿ ಗೇರು ಮರಗಳಿದ್ದು, ಇದರಲ್ಲಿ ಸುಮಾರು 1200 ಇಂಗುಗುಂಡಿಗಳನ್ನು ತೋಡಲಾಗಿದೆ.
ಸುಮಾರು 4 ಫೀಟ್ ಆಳವಿರುವ ಈ ಇಂಗುಗುಂಡಿಗಳಲ್ಲಿ ನೀರು ಇಂಗುವ ಕಾರಣವೇ ಗುಡ್ಡ ಬಿರುಕು ಬಿಡಲು ಕಾರಣವಾಗಿದೆ. ಜೊತೆಗೆ ಗುಡ್ಡದ ಪಕ್ಕದಲ್ಲಿಯೇ ಖಾಸಗಿ ಒಡೆತನದಲ್ಲಿರುವ ಜಾಗದಲ್ಲಿ ಬಂಡೆಗಳನ್ನು ಒಡೆಯಲು ಡೈನಾಮೈಟ್ ( ಸಿಡಿಮದ್ದು) ಬಳಕೆಯಾಗುತ್ತಿದೆ.
ಇದರಿಂದಲೂ ಗುಡ್ಡ ಬಿರುಕು ಬಿಟ್ಟಿರುವುದು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಸ್ಥಳೀಯರಿಂದ ವ್ಯಕ್ತವಾಯಿತು. ಸಭೆಯಲ್ಲಿ ಸ್ಥಳೀಯರಾದ ಬಿ.ಎನ್.ಮುತ್ತಪ್ಪ, ಶಿಕ್ಷಕ ಅಬ್ರಹಾಂ, ಜ್ಯೋತಿ ಇಲೆಕ್ಟ್ರಿಕಲ್ಸ್ನ ಲಿಂಗಪ್ಪ ಗೌಡ, ನಾರಾಯಣ ನಯ್ಕ್, ವಾಸುದೇವ ನಾಯಕ್, ಶಂಕರ ನಾಯಕ್, ಆನಂದ, ಜನಾರ್ಧನ ನಾಯಕ್, ಸತೀಶ್ ಬಪ್ಪಳಿಗೆ, ಸದಾಶಿವ ನಾೈಕ್, ಸುಪ್ರಭಾ, ರಾಧಿಕ, ಸುಬ್ಬಣ್ಣ ಪ್ರಭು, ಕೃಷ್ಣ ಭಟ್, ವೇದಾವತಿ, ಮಿಥುನ್, ಕೇಶವ ನಾೈಕ್, ಲೋಕೇಶ್ ಟಿ, ಹರೀಶ, ಸುಧೀರ್ ಪ್ರಭು, ಟಿ. ಆನಂದ, ಗೀತಾ ನಾಯ್ಕ, ಪ್ರತಿಭಾ ಸಂದೀಪ್, ಗಂಗಾಧರ, ಪ್ರಶಾಂತ್ ಕೆ, ಶ್ರೀಧರ್, ಶರಾವತಿ ಹಾಗೂ ನಗರಸಭಾ ಸದಸ್ಯೆ ದೀಕ್ಷಾ ಪೈ ಮತ್ತಿತರರು ಉಪಸ್ಥಿತರಿದ್ದರು.