ಪುತ್ತೂರು: ಪಿಕಪ್ ನಲ್ಲಿ ಜೋಳದ ಲೋಡ್ ಮತ್ತು ಅದರ ಬೆಂಗಾವಲಾಗಿ ಹೋಗುತ್ತಿದ್ದ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಸುಮಾರು 175 ಕೆ.ಜಿ ತೂಕದ ಭಾರಿ ಪ್ರಮಾಣದ ಗಾಂಜಾ ಸಾಗಾಟ ಪ್ರಕರಣವನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮತ್ತು ಡಿವೈಎಸ್ಪಿ ದಿನಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರ ನೇತೃತ್ವದ ತಂಡ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆದಿಲ ಗ್ರಾಮದ ಪಾಟ್ರಕೋಡಿ ಸಮೀಪ ಆ.11ರಂದು ನಸುಕಿನ ಜಾವ ಈ ಕಾರ್ಯಾಚರಣೆ ನಡೆದಿದ್ದು, ಜಿಲ್ಲೆಯಲ್ಲೇ ಇದೆ ಮೊದಲು ಇಷ್ಟೊಂದು ಪ್ರಮಾಣದ ಗಾಂಜಾ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಜೀಪು ಚಾಲಕ ಮತ್ತು ಕಾರು ಚಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, 175 ಕೆ.ಜಿ ಗಾಂಜಾ, ಜೀಪು ಮತ್ತು ಕಾರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಬಂಧಿತ ಆರೋಪಿಗಳು
ಕಾಸರಗೋಡು ಮಂಜೇಶ್ವರ ಮಿಜಾ ಆಯಿಷಾ ಮಂಜಿಲ್ ದೂರ್ಮಕ್ಕಾಡ್ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು(26), ಮಂಜೇಶ್ವರ ಹೊಸಂಗಡಿ ಮಿಜಿರ್ ಪಳ್ಳ ಮನೆಯ ದಿ.ಮುಸ್ತಾಫ ಎಂಬವರ ಪುತ್ರ ಮೊಹಮ್ಮದ್ ಶಫಿಕ್(31), ವಿಟ್ಲ ಕನ್ಯಾನ ಗ್ರಾಮದ ಮಡಕುಂಜ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರ ಖಲಂದರ್ ಶಾಫಿ(26) ಬಂಧಿತ ಆರೋಪಿಗಳು. ಆರೋಪಿಗಳಿಂದ 175 ಕೆ.ಜಿ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಪಿಕಪ್ ಜೀಪು(ಕೆ.ಎ. 19 ಎಎ 9294) ಮತ್ತು ಟಾಟಾ ಕಂಪೆನಿಯ ಕಾರು (ಕೆ.ಎಲ್ 14 ಎಕ್ಸ್ 9707) ಅನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.
ಘಟನೆ ವಿವರ
ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿಗೆ ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಖಚಿತ ವರ್ತಮಾನದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ಎಸ್.ಐ. ಜಂಬುರಾಜ್ಮಹಾಜನ್, ಸಿಬ್ಬಂದಿಗಳಾದ ಎ.ಎಸ್.ಐ ಚಿದಾನಂದ, ಹೆಡ್ಕಾನ್ಸ್ಟೇಬಲ್ ಸ್ಕರೀಯ, ಕೃಷ್ಣಪ್ಪ, ಜಗದೀಶ್, ಜಯರಾಮ್, ಕಾನ್ಸ್ಟೇಬಲ್ಗಳಾದ ಸುಬ್ರಹ್ಮಣ್ಯ, ಕಿರಣ್, ಶರೀಫ್, ಶರಣ್ ಪಾಟೀಲ್, ಶ್ರೀಶೈಲ, ಆನಂದಯ್ಯ ಅವರು ಕಾರ್ಯಾಚರಣೆ ನಡೆಸಿದರು. ಪಿಕಾಪ್ ಜೀಪನ್ನು ತಪಾಸಣೆ ನಡೆಸಿದಾಗ ಜೀಪಿನ ತುಂಬಾ ಜೋಳದ ಲೋಡ್ಗಳಿದ್ದು, ಸರಿಯಾಗಿ ಪರಿಶೀಲಿಸಿದಾಗ ಜೋಳದ ಲೋಡ್ನ ಕೆಳಗಡೆ ಪ್ಯಾಕೇಟ್ ಮಾದರಿಯಲ್ಲಿ ಅಟ್ಟಿ ಇಟ್ಟ ಗಾಂಜಾ ಬೆಳಕಿಗೆ ಬಂದಿತ್ತು. ಜೀಪಿನ ಬೆನ್ನಲ್ಲೇ ಇದ್ದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಅದರಲ್ಲೂ ನಾಲ್ಕೈದು ಪ್ಯಾಕೇಟ್ ಗಾಂಜಾ ಬೆಳಕಿಗೆ ಬಂತ್ತು. ತಕ್ಷಣ ಜೀಪಿನಲ್ಲಿದ್ದ ಇಬ್ಬರು ಮತ್ತು ಕಾರಿನಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಸುತ್ತುವರಿದು ಬಂಧಿಸಿ ಒಟ್ಟು 175ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ಗಾಂಜಾದ ಮೌಲ್ಯ ರೂ. 17.50 ಲಕ್ಷ ಆಗಿದ್ದು, ರೂ. 4 ಲಕ್ಷ ಮೌಲ್ಯದ ಕಾರು, ರೂ. 3ಲಕ್ಷ ಮೌಲ್ಯದ ಜೀಪು ಎಂದು ಅಂದಾಜಿಸಲಾಗಿದೆ.
ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು:
ಪ್ರಮುಖ ಆರೋಪಿ ಖಲಂದರ್ ಶಾಫಿ ಅವರು ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಅಕ್ರಮ ಗಾಂಜಾ ಪ್ರಕರಣ ಮತ್ತು ಒಂದು ಕೊಲೆ ಯತ್ನ ಪ್ರಕರಣ ಹಾಗೂ ಕಾವೂರು ಠಾಣೆಯಲ್ಲಿ ಒಂದು ಅಕ್ರಮ ಗಾಂಜಾ ಸಾಗಾಟ ಪ್ರಕರಣದ ಆರೋಪಿಯಾಗಿದ್ದರೆ. ಮಂಜೇಶ್ವರದ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಅವರ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ.