ಬೆಳ್ತಂಗಡಿ: ಶಿರಾಡಿ ಘಾಟಿ ಸಂಚಾರ ಬಂದ್ ಆದದ್ದೇ ತಡ, ವಾಹನಗಳ ಸಂಚಾರ ದಟ್ಟಣೆಯಿಂದಾಗಿ ಚಾರ್ಮಾಡಿ ಕಣಿವೆ ರಸ್ತೆ ಕುಸಿಯತೊಡಗಿದೆ.
6 ನೇ ತಿರುವಿನಲ್ಲಿ ಶುಕ್ರವಾರ ಗುಡ್ಡ ಕುಸಿತ ಉಂಟಾಗಿದೆ.ಇದು ಇನ್ನಷ್ಟು ಕುಸಿದರೆ ಸಂಚಾರಕ್ಕೆ ಭಾರಿ ಸಮಸ್ಯೆ ಉಂಟಾಗಲಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.
ಚಾರ್ಮಾಡಿ ಕಣಿವೆ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ.ಘಾಟಿಯ ದ.ಕ. ಭಾಗದ 6ನೇ ತಿರುವಿನ ಬಳಿ ಎತ್ತರದಲ್ಲಿರುವ ರಸ್ತೆಯಲ್ಲಿ ಮಳೆ ನೀರು ಹರಿದು ಗುಡ್ಡ ಕುಸಿತ ಸಂಭವಿಸಿದೆ. ಇಲ್ಲಿ ತಡೆಗೋಡೆ ಇದ್ದರೂ ಅದರ ಪಕ್ಕದಲ್ಲಿ ಕುಸಿತ ಉಂಟಾಗಿದೆ.
ರಸ್ತೆ ಕೆಳಗಿನ ಭಾಗದಿಂದ ಸುಮಾರು 25 ಅಡಿ ಮೇಲ್ಬಾಗದಲ್ಲಿ ಮಣ್ಣು ಕುಸಿದು,ರಸ್ತೆಯ ತಳಭಾಗ ಗೋಚರಿಸುವಷ್ಟು ಮಣ್ಣು ಕೊಚ್ಚಿಹೋಗಿದೆ. ಮಣ್ಣು ಕುಸಿದಿರುವ ರಸ್ತೆ ಪ್ರದೇಶ ಅಗಲ ಕಿರಿದಾಗಿದ್ದು ಹಾಗೂ ಕಣಿವೆ ಪ್ರದೇಶದಲ್ಲಿರುವುರಿಂದ ತೀವ್ರ ಅಪಾಯಕಾರಿಯಾಗಿದೆ.
ಗುಡ್ಡ ಕುಸಿತ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ, ಕುಸಿತ ಉಂಟಾದ ಜಾಗದಲ್ಲಿ ತಡೆಬೇಲಿ ನಿರ್ಮಿಸಲು ಸೂಚಿಸಿ ವಾಹನ ಸವಾರರಿಗೆ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದರು.
ಸಂಚಾರದಲ್ಲಿ ಬದಲಾವಣೆ
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕೃಷ್ಣಕುಮಾರ್, ಅಧಿಕಾರಿಗಳಾದ ಕೀರ್ತಿ ಅಮೀನ್, ಕೇಶವಮೂರ್ತಿ, ಖಾಸಗಿ ಎಂಜಿನಿಯರ್ ದಾಮೋದರ್ ಮೊದಲಾದವರು ಗುಡ್ಡ ಕುಸಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು.ರಸ್ತೆ ಸಮೀಪದ ಕಾಡಿನಲ್ಲಿ ಮರವೊಂದು ಬಿದ್ದು ಮಳೆನೀರು ರಸ್ತೆಗೆ ಹರಿಯಲು ಕಾರಣವಾಗಿತ್ತು. ಅದನ್ನು ಅರಣ್ಯ ಇಲಾಖೆಯ ಸಹಕಾರದಲ್ಲಿ ತೆರವುಗೊಳಿಸಲಾಯಿತು.ಕುಸಿತ ಉಂಟಾದ ಪ್ರದೇಶದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಸ್ಥಳದಲ್ಲಿ ಸಿಬಂದಿಗಳನ್ನು ನಿಯೋಜಿಸಲಾಗಿದೆ. ಮಳೆ ನೀರು ರಸ್ತೆಗೆ ಹರಿದು ಬರದಂತೆ ಮಣ್ಣು ಹಾಕಲಾಗಿದೆ. ಈ ಪ್ರದೇಶದಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸ್ ಸಿಬ್ಬಂದಿ ಕೂಡ ಗಸ್ತು ನಿರತವಾಗಿದ್ದಾರೆ. ಶನಿವಾರ ಇಲ್ಲಿ ಮರಳಿನ ಚೀಲಗಳಿಂದ ತಡೆಗೋಡೆಯನ್ನು ಕಟ್ಟಿ ಹೆಚ್ಚಿನ ಕುಸಿತ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿದುಬಂದಿದೆ. ವಿಪರೀತವಾದ ಮಳೆ, ಇಂಬಳಗಳ ಕಾಟ ಕಾಮಗಾರಿಗೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ.
ವಿಪರೀತ ವಾಹನಗಳು
ಗುರುವಾರದಿಂದ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದರಿಂದ ಹಾಸನ, ಸಕಲೇಶಪುರ ಮೂಲಕ ದ.ಕ. ಜಿಲ್ಲಾ ಭಾಗದಿಂದ ಸಂಚರಿಸುವ ಕೆ.ಎಸ್.ಆರ್.ಟಿ. ಸಿ. ಬಸ್ ಸಹಿತ ಇತರ ವಾಹನಗಳು ಚಾರ್ಮಾಡಿ ಮೂಲಕ ಪ್ರಯಾಣ ನಡೆಸುತ್ತಿವೆ. ಇದರಿಂದ ಚಾರ್ಮಾಡಿ ಭಾಗದಲ್ಲಿ ವಾಹನದಟ್ಟಣೆ ವಿಪರೀತವಾಗಿದೆ.
ಕುಸಿತ ಉಂಟಾಗಿರುವ ಪ್ರದೇಶದಲ್ಲಿ ಹೆಚ್ಚಿನ ಘನವಾಹನಗಳು ಸಂಚರಿಸಿದರೆ ರಸ್ತೆ ಬಿರುಕು ಬಿಡುವ ಸಾಧ್ಯತೆಯಿದೆ.