ಪುತ್ತೂರು: ಇಲ್ಲಿನ ಜುಮ್ಮಾ ಮಸೀದಿ ಕಟ್ಟಡದಲ್ಲಿ ಕ್ಯಾಸೆಟ್ ಅಂಗಡಿಯೊಂದಕ್ಕೆ ಹೋದ ತಂಡವೊಂದು ಚೂರಿ ತೋರಿಸಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಓರ್ವ ಆರೋಪಿಯನ್ನು ಪುತ್ತೂರು ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅಬ್ದುಲ್ ಖಾಸಿಂ ಎಂಬವರ ಪುತ್ರ ಮೊಹಮ್ಮದ್ ಕಮಲ್ ಬಂಧಿತ ಆರೋಪಿ. 2013ರ ಅ.17ರಂದು ಇಲ್ಲಿನ ಜುಮ್ಮಾ ಮಸೀದಿ ಕಟ್ಟಡದಲ್ಲಿದ್ದ ಕ್ಯಾಸೆಟ್ ಅಂಗಡಿಯನ್ನು ಪಕ್ಕದ ಸೆಲೂನ್ ನ ಕರುಣಾಕರ ಭಂಡಾರಿಯವರು ಕ್ಯಾಸೆಟ್ ಅಂಗಡಿ ಮಾಲಕ ರವಿ ಎಂಬವರು ತಿಳಿಸಿದಂತೆ ನೋಡಿಕೊಳ್ಳುತ್ತಿದ್ದ ವೇಳೆ ಕ್ಯಾಸೆಟ್ ಅಂಗಡಿಗೆ ಬಂದ ಅಶ್ರಫ್, ಮೊಹಮ್ಮದ್ ಕಮಲ್, ಸಂಶುದ್ದೀನ್, ಮಹಮ್ಮದ್ ಎಂಬವರು ಗಲಾಟೆ ಮಾಡಿ ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು.
ಪ್ರಕರಣದ 3 ಮಂದಿ ಆರೋಪಿಗಳು ಕೇಸು ಮುಗಿಸಿಕೊಂಡಿದ್ದು, ಓರ್ವ ಆರೋಪಿ ಮೊಹಮ್ಮದ್ ಕಮಲ್ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಆತ ದಮಮ್ನಲ್ಲಿ ಕೆಲಸಕ್ಕೆ ಇದ್ದು ಸ್ವದೇಶಕ್ಕೆ ಮರಳುವ ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಂತೆ ಹೆಡ್ಕಾನ್ಸ್ಟೇಬಲ್ಗಳಾದ ಪರಮೇಶ್ವರ ಮತ್ತು ರಾಧಾಕೃಷ್ಣ ಅವರು ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.