ಸುಳ್ಯ: ಸುಳ್ಯದ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಹಾಗೂ ದಸರಾ ಉತ್ಸವ ಸಮಿತಿಯ ವತಿಯಿಂದ 49ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ -ಸುಳ್ಯ ದಸರಾ’ ಒಂದು ದಿನಕ್ಕೆ ಸೀಮಿತವಾಗಿ ಆಚರಿಸಲಾಗುವುದು. ಪ್ರತಿ ವರ್ಷ 9 ದಿನ ಆಚರಿಸುತ್ತಿದ್ದ ಸುಳ್ಯ ದಸರಾ ಕೊರೊನಾ ಹರಡುವಿಕೆಯ ಹಿನ್ನೆಲೆಯಲ್ಲಿ ಅ.21 ರಂದು ಒಂದು ದಿನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಶಾಸಕ ಎಸ್. ಅಂಗಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಚೆನ್ನಕೇಶವ ದೇವಸ್ಥಾನದ ಬಳಿಯ ಶಾರದಾಂಬಾ ವೇದಿಕೆಯಲ್ಲಿ ಗಣಪತಿ ಹವನ ನಡೆದು, ಶ್ರೀ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀ ದೇವಿಗೆ ಮಧ್ಯಾಹ್ನದ ಮಹಾಪೂಜೆ ಮತ್ತು ಸಂಜೆಯ ವಿಸರ್ಜನಾ ಪೂಜೆ ನಡೆಸಿ ಶ್ರೀ ದೇವಿಯ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಮುಂದಿನ ವರ್ಷ ಶಾರದಾಂಬಾ ಉತ್ಸವದ ಸುವರ್ಣ ಮಹೋತ್ಸವ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಅಂಗಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕಾರ್ಯದರ್ಶಿ ರಾಜೇಶ್ ಕುರುಂಜಿಗುಡ್ಡೆ, ಖಜಾಂಜಿ ರಾಜು ಪಂಡಿತ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನ.ಪಂ. ಸದಸ್ಯ ವಿನಯಕುಮಾರ್ ಕಂದಡ್ಕ ಉಪಸ್ಥಿತರಿದ್ದರು.