ಪುತ್ತೂರು: ನಗರದ ಕಿಲ್ಲೆ ಮೈದಾನದಲ್ಲಿ ನಡೆಯುವ ಜಿಲ್ಲೆಯ ಪ್ರಮುಖ ವಾರದ ಸಂತೆ ಸೋಮವಾರ ಸಾಲ್ಮರದ ಎಪಿಎಂಸಿ ಸಂತೆ ಕಟ್ಟೆಗೆ ವರ್ಗಾವಣೆಗೊಂಡಿದೆ.
ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾದ ಸಂತೆ ಮಾರುಕಟ್ಟೆಯನ್ನು ಎರಡು ದಿನಗಳ ಹಿಂದೆ ಸಹಾಯಕ ಕಮೀಷನರ್ ಡಾ.ಕೆ.ವಿ.ರಾಜೇಂದ್ರ ಅವರು ಪರಿಶೀಲನೆ ನಡೆಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಕಾರಣದಿಂದ ಕಿಲ್ಲೆ ಮೈದಾನದಲ್ಲಿನ ಸಂತೆಯನ್ನು ಸ್ಥಳಾಂತರಿಸಲು ಮುಂದಾಗಿದ್ದರೂ, ಕಿಲ್ಲೆ ಮೈದಾನದ ಅವ್ಯವಸ್ಥೆಗೆ ಪರಿಹಾರ ಎಂಬಂತೆ ಶಾಶ್ವತವಾಗಿ ಎಪಿಎಂಸಿ ಪ್ರಾಂಗಣದಲ್ಲೇ ಸಂತೆ ಮುಂದುವರಿಸುವ ಕುರಿತಂತೆ ಪರ-ವಿರೋಧ ಸಮಸ್ಯೆಯನ್ನು ಮಾತುಕತೆ ಅಥವಾ ಕಾನೂನಿನ ಮೂಲಕ ಬಗೆಹರಿಸಲು ನಿರ್ಧರಿಸಲಾಗಿದೆ.
ಪುತ್ತೂರು ಸಂತೆ
ಪುತ್ತೂರು ನಗರದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆಗೆ 90 ವರ್ಷಗಳ ಇತಿಹಾಸವಿದೆ. ಪುತ್ತೂರು ಹಿಂದೆ ವಿಲೇಜ್ ಪಂಚಾಯತ್ ಆಗಿದ್ದಾಗಲೇ ಪುತ್ತೂರಿನಲ್ಲಿ ಸಂತೆ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಪುತ್ತೂರು ಟೌನ್ ಪಂಚಾಯತ್ ಆಗಿ, ಬಳಿಕ ಪುರಸಭೆಯಾಗಿ ಇದೀಗ ನಗರಸಭೆಯಾಗಿದೆ. ಜನಸಂಖ್ಯೆ 50 ಸಾವಿರಕ್ಕೆ ಏರಿದೆ. ಹಾಗಾಗಿ ಪ್ರತಿ ಸೋಮವಾರ ಕಿಲ್ಲೆ ಮೈದಾನದಲ್ಲಿ ಜನದಟ್ಟಣೆ ಯಿಂದ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು.
ಸಂತೆ ಕಟ್ಟೆ
1996 ರ ತನಕ ಪುತ್ತೂರಿನ ವಾರದ ಸಂತೆಗೆ ನಗರದ ಕೋರ್ಟ್ ಬಳಿ ಸಂತೆ ಕಟ್ಟೆಯಿತ್ತು. ಎಡಿಬಿ ಯೋಜನೆಯಡಿ ಪುತ್ತೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಂತೆ ಕಟ್ಟೆಯನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಸಂತೆ ಕಟ್ಟೆ ಸ್ಥಳದಲ್ಲಿ ಹಾಲಿ ನಗರಸಭಾ ಕಟ್ಟಡ ನಿರ್ಮಾಣವಾಯಿತು. ಇದರ ಕೆಳಗಡೆ ಸಂತೆಗಾಗಿ ಬೆಂಗಳೂರು ಮಾದರಿಯಲ್ಲಿ ವ್ಯವಸ್ಥೆ ಮಾಡಲಾಯಿತಾದರೂ ವರ್ತಕರು ಮತ್ತು ಗ್ರಾಹಕರು ಇಲ್ಲಿಗೆ ಬರಲು ಒಪ್ಪಲಿಲ್ಲ.
ಈ ಪರಿಣಾಮದಿಂದ 1996 ರಲ್ಲಿ ವಾರದ ಸಂತೆ ತನ್ನ ಕಟ್ಟೆಯನ್ನು ಬಿಟ್ಟು ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಸ್ಥಳಾಂತರವಾಯಿತು. ಅಲ್ಲಿಂದ ಇಲ್ಲಿಯ ತನಕ ಪುತ್ತೂರಿನ ವಾರದ ಸಂತೆಗೆ ಕಟ್ಟೆ ನಿರ್ಮಾಣವಾಗಲಿಲ್ಲ. ಇದರ ಪರಿಣಾಮ ವರ್ಷಾನುಗಟ್ಟಲೆಯಿಂದ ಪುತ್ತೂರಿನ ಸಂತೆ ನಗರಸಭಾ ಕಚೇರಿಯ ಪರಿಸರದ ರಸ್ತೆಯಲ್ಲಿ ಮತ್ತು ಕಿಲ್ಲೆ ಮೈದಾನದಲ್ಲಿ ಪ್ರತಿ ಸೋಮವಾರ ನಡೆಯುತ್ತಿದೆ. ಮಳೆಗಾಲದ ದಿನಗಳಲ್ಲಿ ಬಯಲು ಸಂತೆಯ ಅವ್ಯವಸ್ಥೆಯ ಕಥೆ ಹೇಳತೀರದು.
ಪರ-ವಿರೋಧ
ನಗರದ ಸಾಲ್ಮರದಲ್ಲಿ ಎಪಿಎಂಸಿಯಲ್ಲಿ ಸಂತೆ ಮಾರುಕಟ್ಟೆ ಇದೆ. ಪುತ್ತೂರು ಸಂತೆಯನ್ನು ಎಪಿಎಂಸಿಗೆ ವರ್ಗಾಯಿಸಿದ್ದಲ್ಲಿ ವ್ಯವಸ್ಥೆ ಕಲ್ಪಿಸುವ ಇರಾದೆ ಎಪಿಎಂಸಿ ಆಡಳಿತ ಮಂಡಳಿಗೆ ಇದೆ. ಆದರೆ ಈ ಇದಕ್ಕೆ ಈ ಹಿಂದೆ ಪುರಸಭೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ತನ್ನ ತೆರಿಗೆ ಹಣಕ್ಕೆ ಸಮಸ್ಯೆ ಎಂಬ ವಾದ ನೀಡಿದ ಪರಿಣಾಮ ಸ್ಥಳಾಂತರ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು.
ನಗರಸಭೆಯ ಪ್ರಯತ್ನ
ಸಂತೆಗೆ ಕಟ್ಟೆ ಇಲ್ಲ ಎಂಬ ಟೀಕೆಯಿಂದ ಮುಕ್ತಿ ಪಡೆಯಲು ಪುತ್ತೂರು ನಗರಸಭಾ ಆಡಳಿತ ಖಾಸಗಿ ಬಸ್ಸು ನಿಲ್ದಾಣದ ಮುಂಭಾಗದ ಗದ್ದೆಯಲ್ಲಿ ಹೊಸ ಸಂತೆ ಕಟ್ಟೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿತ್ತು. 1.80 ಕೋಟಿ ರೂ. ಗಳಿಗೆ ಖಾಸಗಿಯವರಿಂದ ನಿವೇಶನ ಖರೀದಿ ಮತ್ತು ಸುಸಜ್ಜಿತ ಸಂತೆ ಕಟ್ಟೆ ನಿರ್ಮಾಣಕ್ಕೆ ಒಟ್ಟು 2.80 ಕೋಟಿ ರೂ. ಗಳ ಅಂದಾಜು ವೆಚ್ಚ ತಗುಲುತ್ತದೆ. ಜಾಗ ಖರೀದಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಸಾಧಕ-ಭಾದಕ
ಎಪಿಎಂಸಿ ವಾರ್ಡ್ ಗೆ ಶಿಫ್ಟ್ ಆದರೆ ಅಷ್ಟು ದೂರ ಹೋಗಿ ಬರುವುದು ಕಷ್ಟ ಅನ್ನುವರು ಕೆಲವರು. ಎಪಿಎಂಸಿ ಮಾರುಕಟ್ಟೆಗೆ ತೆರಳುವ ಸಾಲ್ಮರದಲ್ಲಿ ರೈಲ್ವೇ ಗೇಟ್ ಹಾಕುವ ಸಂದರ್ಭದಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಎನ್ನುವುದು ಮತ್ತೊಂದು ವಾದ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳಾಂತರಕ್ಕೆ ಆಸಕ್ತಿ ತೋರುವವರ ಪ್ರಕಾರ ಕಿಲ್ಲೆ ಮೈದಾನದಿಂದ ಸ್ಥಳಾಂತರವಾದರೆ ಸೋಮವಾರದ ಜನದಟ್ಟಣೆಗೆ ಪರಿಹಾರ ಸಾಧ್ಯ. ಯಾಕೆಂದರೆ ಮಿನಿವಿಧಾನಸೌಧ, ಆಸ್ಪತ್ರೆಗೆ ಎಂದು ಬರುವವರ ಪಾಡಿಗೆ ಪರಿಹಾರ ಸಾಧ್ಯ. ಮಳೆಗಾಲದಲ್ಲಿ ಸಂತೆ ಗದ್ದೆಗಿಂತ ಕಡೆ ಆಗುವ ಸ್ಥಿತಿ ತಪ್ಪುತ್ತದೆ. ನಗರವೂ ವಿಸ್ತರಣೆ ಆಗುತ್ತದೆ. ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎನ್ನುವುದು ವಾದಕ್ಕೆ ಹೆಚ್ಚು ಬಲ ಸಿಕ್ಕಿದೆ. ಹಾಗಾಗಿ 20 ವರ್ಷದ ಕಿಲ್ಲೆ ಮೈದಾನದ ಬಯಲು ಸಂತೆ ಇತಿಹಾಸಕ್ಕೆ ಸೇರಲು ಕ್ಷಣಗಣನೆ ಆರಂಭಗೊಂಡಿದೆ.
ಆ.15 ರ ಸಂತೆ ಕಥೆ..!!
ಸೋಮವಾರ ಸ್ವಾತಂತ್ರ್ಯ ಕಾರ್ಯಕ್ರಮ ಮತ್ತು ಅನಂತರ ಚೌತಿ ಆಚರಣೆಯ ಹಿನ್ನಲೆಯಲ್ಲಿ ಸಂತೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ವರ್ಷಂಪ್ರತಿ ರಸ್ತೆ ಬದಿಗೆ ಸ್ಥಳಾಂತರಿಸಲಾಗುತಿತ್ತು. ಈ ಬಾರಿ ರಸ್ತೆ ಬದಿಯಲ್ಲಿ ಅದಕ್ಕೆ ಅವಕಾಶ ಇಲ್ಲ. ಹಾಗಾಗಿ ಆ.15 ರಂದು ಎಪಿಎಂಸಿಗೆ ಸ್ಥಳಾಂತರಿಸಿದೆ. ಭವಿಷ್ಯದ ಹಿತದೃಷ್ಟಿಯಿಂದ ಸಹಾಯಕ ಕಮೀಷನರ್ ಅವರು ಶಾಶ್ವತ ಸ್ಥಳಾಂತರಕ್ಕೆ ಮನಸ್ಸು ಮಾಡಿದ್ದು, ಅದಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.