ಪುತ್ತೂರು: ದಾಖಲೆಗಳಿಲ್ಲದೆ ಇರಿಸಿಕೊಂಡಿರುವ ಅಕ್ರಮ ನಾಡಬಂದೂಕನ್ನು ಕಾಣಿಯೂರು ಬಳಿ ಕೇರಳ ಮೂಲದ ವ್ಯಕ್ತಿಯೋರ್ವರಿಂದ ಬೆಳ್ಳಾರೆ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಎರ್ನಾಕುಲಂ ಪೆರಂಬವೂರು ಕಳಕ್ಕೆಪುರತ್ತಕುಡಿ ಬೈಜು ಎಂಬವರ ಪುತ್ರ ಚಲ್ಲಪ್ಪನ್(45ವ)ರವರು ದಾಖಲೆಗಳಿಲ್ಲದ ಅಕ್ರಮ ನಾಡಬಂದೂಕನ್ನು ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಪಡೆದ ಬೆಳ್ಳಾರೆ ಠಾಣೆಯ ಎಸ್.ಐ ಈರಯ್ಯ ಮತ್ತು ಸಿಬಂದಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ದಿನಕರ್ ಶೆಟ್ಟಿ ಮತ್ತು ಸುಳ್ಯ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಕೋವಿ ಇರಿಸಿಕೊಂಡಿದ್ದ ಚಲ್ಲಪ್ಪನ್ ಅವರನ್ನು ಕಾಣಿಯೂರು ಗ್ರಾಮದ ಬಳಿ ಫೆ. 12ರಂದು ಹಿಡಿದು ತಪಾಸಣೆ ನಡೆಸಿದ ವೇಳೆ ಅವರಿಂದ ನಾಡ ಬಂದೂಕನ್ನು ವಶಕ್ಕೆ ಪಡೆದು ಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.