ಕಾರವಾರ: ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ನಡೆದ ಅಪರಾಧಿ ಚಟುವಟಿಕೆಗಳಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಬೇರು ಸಹಿತ ಕಿತ್ತೆಸೆಯಲು ಮುಂದಾಗಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಆಯೋಜಿಸಿರುವ ಮಂಗಳೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸಿದ್ದರಾಮಯ್ಯ ಸರಕಾರದ ಅಧಿಕಾರಾವಧಿಯಲ್ಲಿ 7748 ಕೊಲೆ, 11950 ಕೊಲೆ ಯತ್ನ, 14447 ಡಕಾಯಿತಿ, 2588 ಭೀಕರ ಡಕಾಯಿತಿ, 12727 ಮನೆಗಳ್ಳತನ, 11725 ಅಪಹರಣ, 3832 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ರಾಜ್ಯವನ್ನು ತಲ್ಲಣಗೊಳಿಸುವಂತೆ ಮಾಡಿದೆ. ಹಿಂದೂಗಳನ್ನು ನಿರಂತರವಾಗಿ ಹತ್ಯೆಗೈಯಲಾಗುತ್ತಿದೆ. ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಪಾರುಪತ್ಯ ವಹಿಸಿದೆ ಆರೋಪಿಸಿದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಪುಣ್ಯ ಭೂಮಿಯಿಂದ ಆರಂಭಗೊಂಡಿರುವ ಪಾದಯಾತ್ರೆಯೆ ಕಾಂಗ್ರೆಸ್ ಸರಕಾರದ ತಿಲಾಂಜಲಿಗೆ ನಾಂದಿಯಾಗಲಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಕಾಲ ಸನ್ನಿಹಿತವಾಗಿದ್ದು, ಸಿದ್ಧಗೊಳ್ಳುತ್ತಿರುವ ಕಾಂಗ್ರೆಸ್ ಶವಪೆಟ್ಟಿಗೆಯ ಅಂತಿಮ ಮೊಳೆಯನ್ನು ಸಿದ್ದರಾಮಯಯ್ಯನವರೇ ಬಡಿಯಲಿದ್ದಾರೆ ಎಂದರು.
ವೇದಿಕೆಯಲ್ಲಿ ಸುನಿಲ ಹೆಗಡೆ, ಉದಯಕುಮಾರ ಶೆಟ್ಟಿ, ಕಮಲಾಕರ ಮೇಸ್ತ, ರುಕ್ಮಾ ಮೇಸ್ತ, ಗಣಪತಿ ಉಳ್ವೇಕರ, ನ್ಯಾಯವಾದಿ ನಾಗರಾಜ ನಾಯಕ, ರೂಪಾಲಿ ನಾಯ್ಕ, ಶಾರದಾ ನಾಯ್ಕ, ರಾಮು ರಾಯ್ಕರ, ಭಾಸ್ಕರ ನಾರ್ವೇಕರ, ಜಗದೀಶ ನಾಯಕ ಮೊಗಟಾ, ಭಾಗ್ಯಲಕ್ಷ್ಮೀ ನಾಯ್ಕ, ಜಯಾ ಬಾಲಕೃಷ್ಣ ನಾಯ್ಕ ಸೇರಿದಂತೆ ಹಲವರು ಇದ್ದರು. ಹೊನ್ನಾವರದ ಮೃತ ಪರೇಶ ಮೇಸ್ತನ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.