ಉಳ್ಳಾಲ: ಬೈಕಿಗೆ ಲಾರಿಯೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಎಂಸಿಎಫ್ ಉದ್ಯೋಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರು ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮುಡಿಪು ಕೊಡಕ್ಕಲ್ ನಿವಾಸಿ ಮಹೇಶ್ ಭಟ್ ಕೊಡಕ್ಕಲ್(32) ಮೃತರು. ಮಂಗಳೂರಿನ ಕೊಟ್ಟಾರದಲ್ಲಿ ಮೇ 19ರಂದು ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ವಿವಾಹಿತರಾಗಿರುವ ಇವರು ಪತ್ನಿ ಹಾಗೂ ಒಂದೂವರೆ ಹರೆಯದ ಮಗುವಿನ ಜೊತೆಗೆ ಶಕ್ತಿನಗರ ಸಮೀಪ ರೂಮಿನಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಬೈಕಿನಲ್ಲಿ ಕೆಲಸಕ್ಕೆ ಹೊರಟಿದ್ದವರು ಪತ್ನಿ ಸಂಗೀತಾ ಅವರನ್ನು ನಂತೂರು ಸಮೀಪ ಬಿ.ಎಡ್ ಕಾಲೇಜಿಗೆ ಬಿಟ್ಟು, ಬೈಕಂಪಾಡಿ ಎಂಸಿಎಫ್ ಕಡೆಗೆ ಪ್ರಯಾಣ ಬೆಳೆಸಿದ್ದರು. ದಾರಿಮಧ್ಯೆ ಕೊಟ್ಟಾರ ಫ್ಲೈಓವರ್ ತಲುಪುತ್ತಿದ್ದಂತೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಿಂದ ರಸ್ತೆಗೆ ಬಿದ್ದ ಮಹೇಶ್ ಅವರ ತಲೆಯ ಭಾಗಕ್ಕೆ ಗಾಯವಾಗಿತ್ತು.
ಅಪಘಾತಕ್ಕೆ ಕಾರಣವಾದ ಲಾರಿ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಇದನ್ನು ಮಹೇಶ್ ಅವರ ಬೈಕಿನ ಹಿಂಬದಿಯಿದ್ದ ಸಹೋದ್ಯೋಗಿ ಗಮನಿಸಿ ಲಾರಿ ನೋಂದಣಿ ಸಂಖ್ಯೆಯನ್ನು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರು ಸುರತ್ಕಲ್ ಸಮೀಪ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಮಹೇಶ್ ಭಟ್ ಅವರನ್ನು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ತಡರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಮುಡಿಪು ಸಾರ್ವಜನಿಕ ಗಣೇಶೋತ್ಸವ ಸಮಿತಿ, ಬ್ರಾಹ್ಮರಿ ಯಕ್ಷ ಮಿತ್ರರು ಹಾಗೂ ಸ್ಥಳೀಯ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ತಂದೆ, ತಾಯಿ, ಪತ್ನಿ, ಸಹೋದರ, ಒಂದೂವರೆ ಹರೆಯದ ಮಗು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.