News Karnataka Kannada
Thursday, May 02 2024
ಕರಾವಳಿ

ಉಡುಪಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬೃಹತ್‌ ಜನಾಗ್ರಹ ಸಭೆ

Photo Credit :

ಉಡುಪಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬೃಹತ್‌ ಜನಾಗ್ರಹ ಸಭೆ

ಉಡುಪಿ: ರಾಮಮಂದಿರ‌‌ ಅಯೋದ್ಯೆಯಲ್ಲಿ‌ ನಿರ್ಮಾಣವಾಗಲೇಬೇಕು ಎಂದು ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಪಟ್ಟು ಹಿಡಿದು ಹೇಳಬೇಕು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ ಮಂಜುನಾಥ್ ಸ್ವಾಮಿ ಆಗ್ರಹಿಸಿದರು. 

ಉಡುಪಿ ಶ್ರೀಕೃಷ್ಣಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. 

ರಾಮಮಂದಿರ ನಿರ್ಮಾಣ ಆಗಲೇಬೇಕು ಎಂದು ಪುನರುಚ್ಚರಿಸಿದ ಅವರು ರಾಮಮಂದಿರ ವಿಚಾರದಲ್ಲಿ ಅಗತ್ಯ ಸಾಕ್ಷ್ಯಗಳು ಇದ್ದರೂ 2010ರಲ್ಲಿ ಅಲಹಾಬಾದ್ ಹೈಕೋರ್ಟ್‌ ಪಾರ್ಟಿಷನ್ ಡೀಡ್‌ ತೀರ್ಪು ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಮಾತ್ರವೇ ನಿರ್ಮಾಣವಾಗಬೇಕು. ರಾಮಭೂಮಿಯನ್ನು ಹಂಚಲು ಬಿಡುವುದಿಲ್ಲ ಎಂದರು. 

ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಬೇಕು ಎಂಬ ತೀರ್ಪು ಬಂದರೆ ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. 

ರಾಮಮಂದಿರ ಚಂಡಮಾರುತ ದೇಶಾದ್ಯಂತ ಹರಡುತ್ತಿದೆ.ರಾಮಮಂದಿರವನ್ನು ವಿರೋಧಿಸುವವರು ಚಂಡಮಾರುತದ ಹೊಡೆತಕ್ಕೆ ಕೊಚ್ಚಿ ಹೋಗುತ್ತಾರೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ನಾವೇನೂ ಪಾಕಿಸ್ತಾನ, ಚೀನಾದಲ್ಲಿ ರಾಮಮಂದಿರ ಕಟ್ಟಿಕೊಡಿ‌ ಎಂದು ಕೇಳುತ್ತಿದ್ದೇವಾ?  ಶ್ರೀರಾಮನ ಮಾತೃಭೂಮಿಯಲ್ಲೇ ಮಂದಿರ ನಿರ್ಮಾಣವಾಗಬೇಕು ಎಂದು ಕೇಳುತ್ತಿದ್ದೇವಷ್ಟೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಈ‌ ಆಗ್ರಹವನ್ನು ಎಲ್ಲರೂ ಬೆಂಬಲಿಸಬೇಕು ಎಂದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ,  ರಾಮಮಂದಿರ ಪರವಾದ  ಜನರ ಭಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುತ್ತೇನೆ ಎಂದು  ಹೇಳಿದರು. 

ಅಖಿಲ ಭಾರತ ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ರಾಘವಲು ಮಾತನಾಡಿ, ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣ ಆಗುವ ಮಸೂದೆ ಮಂಡನೆ ಆಗಬೇಕು. ಈ ಕುರಿತು  ಸಂಸದರ ಮೇಲೆ ಒತ್ತಡ ಹಾಕಬೇಕು ಎಂದರು. ಆನೆಗುಂದಿ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಬಾಳೆಕುದ್ರು ಮಠದ ನರಸಿಂಹಾಶ್ರಮ ಸ್ವಾಮೀಜಿ, ಅದಮಾರು ಮಠ ಕಿರಿಯ ಈಶಪ್ರಿಯ ಸ್ವಾಮೀಜಿ, ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳದ ಪ್ರಮುಖರಾದ ಪ್ರೊ. ಎಂ.ಬಿ. ಪುರಾಣಿಕ್,  ಕೆ.ಆರ್‌.ಸುನೀಲ್ ಮಾತನಾಡಿ ರಾಮಮಂದಿರಕ್ಕೆ ತಮ್ಮ‌ ಬೆಂಬಲ‌ ಸೂಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು