ಪುತ್ತೂರು: ಜೆಸಿಬಿ ಕೆಲಸದ ವೇಳೆ ಖಾಸಗಿ ಮನೆಯೊಂದರ ಆವರಣಗೋಡೆಯೊಂದು ಕುಸಿದು ನಿವೃತ್ತ ಶಿಕ್ಷಕಿಯೋರ್ವರ ಮೇಲೆ ಬಿದ್ದು ತೀವ್ರ ಗಾಯಗೊಂಡ ಘಟನೆ ಮುಕ್ರಂಪಾಡಿಯಲ್ಲಿ ನ.13ರಂದು ನಡೆದಿದೆ.
ನಗರಸಭೆ ವ್ಯಾಪ್ತಿಯ ಮುಕ್ರಂಪಾಡಿ ಎಂಬಲ್ಲಿ ಜಲಸಿರಿ ಯೋಜನೆಯ ಪೈಪ್ ಲೈನ್ ಕಾಮಗಾರಿಗೆಂದು ಗುತ್ತಿಗೆದಾರರ ನೇತೃತ್ವದಲ್ಲಿ ಜೆಸಿಬಿ ಕೆಲಸ ನಡೆಯುತ್ತಿದ್ದ ವೇಳೆ ಪಕ್ಕದ ನಿವೃತ್ತ ಎ.ಎಸ್.ಐ ಸಾಂತಪ್ಪ ಗೌಡ ಎಂಬವರ ಮನೆಗೆ ಸೇರಿದ ಆವರಣಗೋಡೆಯೊಂದು ಕುಸಿದು ಬಿದ್ದಿದೆ. ಇದೇ ವೇಳೆ ಸಾಂತಪ್ಪ ಗೌಡರ ಪತ್ನಿ ನಿವೃತ್ತ ಶಿಕ್ಷಕಿ ಅಕ್ಕಯ್ಯ ಎಂಬವರು ಮನೆಯ ಹಿಂಬದಿ ಬಟ್ಟೆ ಒಣಗಲು ಹಾಕುತ್ತಿದ್ದು ಆವರಣಗೋಡೆ ಅವರ ಮೇಲೆ ಬಿದ್ದಿದ್ದು, ತೀವ್ರ ಗಾಯಗೊಂಡ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.