ಬೆಳ್ತಂಗಡಿ: ಆಡಂಬರದ ಕಾರ್ಯಕ್ರಮ ಯಾವತ್ತೂ ಸಲ್ಲದು. ಅದಕ್ಕಾಗಿಯೇ ಧರ್ಮಸ್ಥಳ ಗ್ರಾ. ಯೋಜನೆ ಬದುಕಿನಲ್ಲಿ ಸರಳತೆಯನ್ನು ಕಲಿಸಿಕೊಟ್ಟಿದೆ. ತಿಳುವಳಿಕೆ ಮತ್ತು ಮಾಹಿತಿ ಇದ್ದರೆ ಜೀವನ ಸುಲಭವಾಗುತ್ತದೆ. ಅದನ್ನು ಯೋಜನೆಯ ಸದಸ್ಯರು ಕಲಿತುಕೊಂಡಿದ್ದಾರೆ ಎಂದು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ವೇಣೂರು ವಲಯದ ಗುಂಡೂರಿ ಪ್ರಗತಿ ಬಂಧು ಜ್ಞಾನ ವಿಕಾಸ ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಜನಜಾಗೃತಿ ಗ್ರಾಮ ಸಮಿತಿ ಗುಂಡೂರಿ ಇದರ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯಾದ್ಯಂತ ವ್ಯಾಪಕವಾಗಿ ಪಸರಿಸಿಕೊಂಡಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿಗೆ ನೋಟು ರದ್ದತಿಯಿಂದ ಯಾವುದೇ ತೊಂದರೆ ಆಗಿಲ್ಲ. ಇದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳ ಪಾರದರ್ಶಕತೆಯನ್ನು ತೋರಿಸಿದೆ. ಇದರ ಯೋಚನೆಗಳೇ ಪಾರದರ್ಶಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಡೂರಿ ಹಾಲು ಉ.ಸ. ಸಂಘದ ಅಧ್ಯಕ್ಷ ಪ್ರವೀಣ ಚಂದ್ರ ಜೈನ್ ಜಂತೋಡಿಗುತ್ತು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುಂಡೂರಿ ಆರಂಬೋಡಿ ಗ್ರಾ.ಪಂ. ಸದಸ್ಯ ಹರೀಶ್ ಕುಮಾರ್ ಪೊಕ್ಕಿ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಯೋಗೀಶ್ ಕೆ., ಗುಂಡೂರಿ ಶ್ರೀ ಸತ್ಯನಾರಾಯಣ ಪೂಜಾ ಭಜನಾ ಮಂಡಳಿಯ ಅಧ್ಯಕ್ಷ ಶಾಂತಿರಾಜ ಜೈನ್, ಪ್ರಗತಿಬಂಧು ಒಕ್ಕೂಟದ ವೇಣೂರು ವಲಯಧ್ಯಕ್ಷ ಅಶೋಕ್ ಕಜಿಪಟ್ಟ, ಒಕ್ಕೂಟದ ನೂತನ ಅಧ್ಯಕ್ಷ ಚಂದ್ರಶೇಖರ ಕುಲಾಲ್, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಮೋನಪ್ಪ ಕುಲಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ: ವೇದಿಕೆಯಲ್ಲಿ ಪತ್ರಕರ್ತ ಪದ್ಮನಾಭ ವೇಣೂರು ಅವರನ್ನು ಸಮ್ಮಾನಿಸಲಾಯಿತು.
ಸೇವಾಪ್ರತಿನಿಧಿ ಹರೀಶ್ ಪೂಜಾರಿ ಸಂದೇಶಪತ್ರ ವಾಚಿಸಿದರು. ಒಕ್ಕೂಟದ ಕೋಶಾಧಿಕಾರಿ ಕುಶಾಲಾಕ್ಷಿ ವರದಿ ವಾಚಿಸಿದರು. ಒಕ್ಕೂಟದ ನೂತನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ ಸ್ವಾಗತಿಸಿ, ಗೋಪಾಲ ಪೂಜಾರಿ ವಂದಿಸಿದರು. ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರೂಪಿಸಿದರು.