ಸುಳ್ಯ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ನಡೆದ ಹೋರಾಟ ಅವಿಸ್ಮರಣೀಯವಾದುದು. ಈ ಹೋರಾಟದ ಕರಸೇವೆಯಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ಪ್ರತಿಯೊಬ್ಬ ಕರಸೇವಕನ, ಕಾರ್ಯಕರ್ತನ ಪೂರ್ವ ಜನ್ಮದ ಪುಣ್ಯ ಎಂದು ಆರ್ಎಸ್ಎಸ್ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ ಹೇಳಿದ್ದಾರೆ.
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ನಡೆಯುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ವತಿಯಿಂದ ಸುಳ್ಯದ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ನಡೆದ ಭಜನೆ ಹಾಗೂ ಕರ ಸೇವೆಯಲ್ಲಿ ಭಾಗವಹಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಕ್ಷಾಂತರ ಮಂದಿ ಕರ ಸೇವಕರು ತಮ್ಮ ಜೀವವನ್ನೇ ಪಣವಾಗಿಟ್ಟು ಅಂದು ಹೋರಾಟ ನಡೆಸಿದರು. ಆ ಹೋರಾಟದ ಫಲವಾಗಿ ಭವ್ಯ ರಾಮಮಂದಿರ ಎದ್ದು ನಿಲ್ಲಲಿದೆ. ನಮ್ಮ ದೇಶವನ್ನು ಗೌರವಯುತ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬೇಕು ಎಂದು ನಡೆಸಿದ ಹೋರಾಟ ಇಂದು ಫಲ ನೀಡಿದೆ. ಈ ಸಾಹಸಮಯ ಹೋರಾಟವನ್ನು ಆದರ್ಶವಾಗಿಸಿಕೊಂಡು ಸಂಘಟನಾ ಶಕ್ತಿಯನ್ನು ಇನ್ನಷ್ಟು ಗಟ್ಟಿ ಮಾಡಬೇಕು ಎಂದು ಅವರು ಕರೆ ನೀಡಿದರು.
ಅಯೋಧ್ಯೆಯಲ್ಲಿ ಕರ ಸೇವೆಯಲ್ಲಿ ಭಾಗಿಯಾದ ಸಂದರ್ಭದ ಅನುಭವವನ್ನು ಅವರು ವಿವರಿಸಿದರು.
ಕರ ಸೇವಕರಾಗಿ ಭಾಗವಹಿಸಿದ ಗಣಪತಿ ಭಟ್ ಮಜಿಗುಂಡಿ, ಎನ್.ಎ.ರಾಮಚಂದ್ರ, ಕೇಶವ ಪ್ರಭು ಜಟ್ಟಿಪಳ್ಳ, ದಾಮೋದರ ಮಂಚಿ, ಗೋಪಾಲಕೃಷ್ಣ ಕರೋಡಿ, ಜಿ.ಜಿ. ನಾಯಕ್, ಪ್ರಕಾಶ್ ಶೆಣೈ, ರಾಧಾಕೃಷ್ಣ ಕುಕ್ಕಂದೂರು, ಕುಸುಮಾಧರ ಜಯನಗರ ಮೊದಲಾದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದ ಭಜನಾ ಕಾರ್ಯಕ್ರಮ ನಡೆಯಿತು. ದುರ್ಗಾಮಾತ ಭಜನಾ ಮಂಡಳಿ ಅರಂತೋಡು, ದುರ್ಗಾ ವಾಹಿನಿವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಭಜನೆ ನೆರವೇರಿಸಿದರು ವಿ.ಹಿಂ.ಪ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಭಜರಂಗದಳ ತಾಲೂಕು ಸಂಚಾಲಕ ನಿಕೇಶ್ ಉಬರಡ್ಕ, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ ಮೊದಲಾದವರು ಉಪಸ್ಥಿತರಿದ್ದರು.