ಸುಳ್ಯ: ಸುಳ್ಯ ತಾಲೂಕು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆಯಿತು.
ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸುಳ್ಯ ನಗರ ವ್ಯಾಪ್ತಿಯಲ್ಲಿ ನದಿ ಪೊರಂಬೋಕು ಸ್ಥಳದಲ್ಲಿ ಅನಧಿಕೃತ ಕಟ್ಟಡಗಳು ಕಟ್ಟಿರುವುದರ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಶಾಸಕರು ಪ್ರಶ್ನಿಸಿದರು. ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ ಎಂದು ನಗರ ಪಂಚಾಯಿತಿ ಅಧಿಕಾರಿ ಸಭೆಗೆ ತಿಳಿಸಿದರು. ಈ ಕುರಿತು ಕಂದಾಯ, ಲೋಕೋಪಯೋಗಿ ಇಲಾಖೆ ಮತ್ತು ನ.ಪಂ.ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ಶಾಸಕರು ಸೂಚಿಸಿದರು.
ಸಾಲಮನ್ನಾ ಸೇರಿದತೆ ಎಲ್ಲಾ ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಆಗಿದೆ. ಆದರೆ ತಾಲೂಕಿನಲ್ಲಿ ಆಧಾರ್ ಕಾರ್ಡ್ ದೊರೆಯಲು ಸಮಸ್ಯೆ ಇದೆ ಎಂದು ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಹೇಳಿದರು. ಆಧಾರ್ ಕಾರ್ಡ್ ಎಲ್ಲರಿಗೂ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕರು ಕಂದಾಯ ಇಲಾಖೆಗೆ ಸೂಚಿಸಿದರು.
ಅಜ್ಜಾವರ ಗ್ರಾಮದಲ್ಲಿ ರಾತೋ ರಾತ್ರಿ ಮದ್ಯದಂಗಡಿ ತೆರದಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಗ್ರಾಮ ಪಂಚಾಯಿತಿಯಿಂದ ಕ್ಯಾಟರಿಂಗ್ ಸರ್ವೀಸ್ಗೆ ಅಂತ ಪರವಾನಗಿ ನೀಡಿದ್ದಾರೆ. ಮದ್ಯದಂಗಡಿ ತೆರೆದಿರುವುದಕ್ಕೆ ಪಂಚಾಯಿತಿ ವತಿಯಿಂದ ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು. ಈ ಕುರಿತು ಚರ್ಚೆ ನಡೆದು ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು. ಸಾರ್ವಜನಿಕರ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಮದ್ಯದಂಗಡಿಗೆ ನೀಡಿರುವ ಪರವಾನಗಿಯನ್ನು ರದ್ದು ಪಡಿಸುವಂತೆ ಮೇಲಧಿಕಾರಿಗಳಿಗೆ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಆನೆ ಹಾವಳಿ ತಡೆಯಲು ಆನೆ ಕಂದಕಗಳ ನಿರ್ಮಾಣ ಕಾರ್ಯವನ್ನು ಮುಂದುವರಿಸಲಾಗುತ್ತಿದ್ದು ಈ ವರ್ಷ ಸುಳ್ಯ, ಸುಬ್ರಹ್ಮಣ್ಯ, ಪಂಜ ವಲಯಗಳಲ್ಲಿ ಒಟ್ಟು 17 ಕಿ.ಮಿ. ಆನೆ ಕಂದಕ ನಿರ್ಮಿಸಲಾಗುವುದು. ಅಲ್ಲದೆ ಕಂದಕ ನಿರ್ಮಿಸಲಾಗದ ಕಡೆಗಳಲ್ಲಿ ಆನೆಗಳು ದಾಟದಂತೆ ಕಾಂಕ್ರೀಟ್ ಫಿಲ್ಲರ್ಸ್ಗಳನ್ನು ನಿರ್ಮಿಸಲಾಗುವುದು. ಸುಳ್ಯ ವಲಯದಲ್ಲಿ 13 ಕಡೆಗಳಲ್ಲಿ 150 ಮೀ. ಈ ರೀತಿಯಲ್ಲಿ ಕಾಂಕ್ರೀಟ್ ಫಿಲ್ಲರ್ ಗಳನ್ನು ಅಳವಡಿಸುವ ಯೋಜನೆ ಇದೆ ತಾಲೂಕಿನಲ್ಲಿ ಒಟ್ಟು 250 ಮೀ. ಕಾಂಕ್ರೀಟ್ ಫಿಲ್ಲರ್ ಗಳ ನಿರ್ಮಾಣ ನಡೆಯಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.