ವಿಜಯನಗರ: ಇಂದು (ಜು.10) ಹಂಪಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ಜಿ 20 ಸಂಸ್ಕೃತಿ ವರ್ಕಿಂಗ್ ಗ್ರೂಪ್ (ಸಿಡಬ್ಲ್ಯೂಜಿ) ಸಭೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ನಾವು ನಾಲ್ಕು ಆದ್ಯತೆಗಳನ್ನು ಗುರುತಿಸುವ ಮತ್ತು ಚರ್ಚಿಸುವ ಮೂಲಕ ಈ ಸಭೆಯನ್ನು ನಡೆಸಲು ಮುಂದಾಗಿದ್ದೇವೆ. ಹಂಪಿ ನಮ್ಮ ದೇಶದ ಸಂಸ್ಕೃತಿ ಹೃದಯಭಾಗ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ.
ನಮ್ಮ ಮುಂದೆ ಇರುವ 4 ಆದ್ಯತೆಯ ಕ್ಷೇತ್ರಗಳೆಂದರೆ, 1. ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಪುನರ್ರಚನೆ, 2. ಸುಸ್ಥಿರ ಭವಿಷ್ಯಕ್ಕಾಗಿ ಲಿವಿಂಗ್ ಹೆರಿಟೇಜ್ ಬಳಸಿಕೊಳ್ಳುವುದು, 3. ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳು ಮತ್ತು ಸೃಜನಾತ್ಮಕ ಆರ್ಥಿಕತೆಯ ಪ್ರಚಾರ, 4. ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು ಎಂದು ಹೇಳಿದರು.
ಈ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಅಮೂಲ್ಯ ಕೊಡುಗೆಗಳನ್ನು ಎತ್ತಿ ಹಿಡಿಯುವುದು ಕೂಡ ಒಂದು ಪ್ರಮುಖ ಕಾರ್ಯವಾಗಿದೆ. G20ಯಲ್ಲಿ ಪ್ರಾಥಮಿಕ ಕರಡು ಪ್ರತಿಯ ಒಳನೋಟದ ಬಗ್ಗೆ ನೀವು ಕೂಡ ಹಂಚಿಕೊಳ್ಳಲು ಇದು ಸದವಕಾಶ ಎಂದು ಹೇಳಿದರು.