ಕಲಬುರಗಿ:ಇತ್ತೀಚೆಗೆ ನಡೆದಂತಹ ರಾಜ್ಯದ ನಿಗಮ, ಮಂಡಳಿಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದಂತಹ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಡೆದ ಪರೀಕ್ಷಾ ಅಕ್ರಮದಲ್ಲಿ ತನ್ನ ಹೆಸರು ಪ್ರಸ್ತಾಪವಾಗಿದ್ದಲ್ಲದೆ, ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಲಬುರಗಿಯಿಂದ ಪರಾರಿಯಾಗಿದ್ದ ಕಿಂಗ್ಪಿನ್ ಆರ್.ಡಿ.ಪಾಟೀಲ್ ಸೋಮವಾರ ಕಲಬುರಗಿಯಲ್ಲೇ ದಿಢೀರ್ ಪ್ರತ್ಯಕ್ಷನಾದಾಗ, ಈತನ ಚಲನ ವಲನದ ಮೇಲೆ ನಿಗಾ ಇಟ್ಟಿದ್ದ ಕಲಬುರಗಿ ಪೊಲೀಸರು ಈತನ ಬಂಧನಕ್ಕೆ ಮುಂದಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಈ ಬಗ್ಗೆ ಸೋಮವಾರ ಸಂಜೆ ಕಲಬುರಗಿಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವಲ್ಲದೆ, ರಾತ್ರಿ 8 ಗಂಟೆಗೆ ಆರ್.ಡಿ ಪಾಟೀಲ್ ಬಂಧನದ ದಟ್ಟ ವದಂತಿಗಳು ಕೂಡಾ ಹರಡಿದ್ದವು. ಒಂದು ಹಂತದಲ್ಲಿ ಆರ್ ಡಿ ಪಾಟೀಲ್ನನ್ನು ಕಲಬುರಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂಬ ಸುದ್ದಿ ಹರಡಿತ್ತು. ಈ ಬಗ್ಗೆ ಕಲಬುರಗಿ ನಗರ ಪೊಲೀಸ್ ಕಮೀಷನರ್ ಆರ್. ಚೇತನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರನ್ನು ಸಂಪರ್ಕಿಸಿದಾಗ ಸದರಿ ಪ್ರಕರಣದಲ್ಲಿ ಆರ್ಡಿ ಪಾಟೀಲ್ ಬಂಧನದ ಬೆಳವಣಿಗೆಯನ್ನು ಅಲ್ಲಗಳೆದಿದ್ದಾರೆ.ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಡೆದಂತಹ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲ್ಪೂರದಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಆರ್ಡಿ ಪಾಟೀಲನನ್ನೇ ಪೊಲೀಸರು ಪ್ರಥಮ ಆರೋಪಿಯನ್ನಾಗಿ ಮಾಡಿದ್ದಾರೆ. ಇದಲ್ಲದೆ ಕಲಬುರಗಿಯ ಅಶೋಕ ನಗರ ಹಾಗೂ ವಿವಿ ಠಾಣೆಗಳಲ್ಲಿ ದಾಖಲಾಗಿರುವ ಪರೀಕ್ಷೆ ಅಕ್ರಮ ಸಂಬಂಧದ ಪ್ರಕರಣಗಳಲ್ಲಿಯೂ ಆರ್.ಡಿ ಪಾಟೀಲ್ ಹೆಸರು ಆರೋಪಿಗಳ ಪಟ್ಟಿಯಲ್ಲಿ ದಾಖಲಾಗಿದೆ. ಹೀಗಾಗಿ ಆರ್ಡಿ ಪಾಟೀಲ್ ಪರೀಕ್ಷಾ ಸಂಬಂಧಿ ಅಕ್ರಮದ ಪ್ರಕರಣಗಳಲ್ಲಿ ಕಲಬುರಗಿ ಪೊಲೀಸರಿಗೆ ಬೇಕಾಗಿದ್ದಾನೆ.