ರಾಯಚೂರು: ಜಿಲ್ಲೆಯಲ್ಲಿನ ಶಕ್ತಿ ನಗರ ಬಳಿಯ ಕೃಷ್ಣಾ ನದಿಯಲ್ಲಿ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ. ರಾಯಚೂರು-ತೆಲಂಗಾಣ ಗಡಿಯಲ್ಲಿರುವ ಶಕ್ತಿ ನಗರ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಈ ಸೇತುವೆ ಕಾಮಗಾರಿ ವೇಳೆ ಕೃಷ್ಣಾ ನದಿಯಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ.
ಕೃಷ್ಣಾ ನದಿಯಲ್ಲಿ ಶ್ರೀಕೃಷ್ಣನ ದಶಾವತಾರದ ವಿಗ್ರಹ ಹಾಗೂ ಶಿವನ ಲಿಂಗ ಪತ್ತೆಯಾಗಿದೆ. ಈ ವಿಗ್ರಹಗಳನ್ನು ಸಿಬ್ಬಂದಿ ಸುರಕ್ಷಿತವಾಗಿ ನದಿಯಿಂದ ಹೊರತೆಗೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಾತತ್ವ ಇಲಾಖೆಗೆ ಸಿಬ್ಬಂದಿ ವಿಗ್ರಹಗಳನ್ನು ಪರಿಶೀಲಿಸಿ ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ದೇವಸ್ಥಾನಗಳ ಧ್ವಂಸದ ವೇಳೆ ಮತಾಂದರ ಕೈಯಿಂದ ವಿಗ್ರಹಗಳನ್ನು ರಕ್ಷಿಸಿಕೊಳ್ಳಲು ಅಂದಿನ ಜನರು ವಿಗ್ರಹಗಳನ್ನು ನದಿಯಲ್ಲಿ ಮುಳುಗಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ವಿಗ್ರಹಗಳ ಬಗ್ಗೆ ಇತಿಹಾಸ ತಜ್ಞೆ ಪದ್ಮಜಾ ದೇಸಾಯಿ ಮಾತನಾಡಿ, ಸದ್ಯ ದೊರೆತದ್ದು ಹಸಿರು ಮಿಶ್ರಿತ ಶಿಲೆ. ಈ ಮಾದರಿಯ ಶಿಲೆಗಳನ್ನು ಕಲ್ಯಾಣ ಚಾಲುಕ್ಯರು ಬಳಸುತ್ತಿದ್ದರು.
ಬಹುಮನಿ ಸುಲ್ತಾನರ ಅವಧಿಯಲ್ಲಿ ಗರ್ಭ ಗುಡಿಯಲ್ಲಿ ಮೂರ್ತಿಗಳನ್ನು ಕೃಷ್ಣಾ ನದಿಗೆ ಬೀಸಾಡಿರಬಹುದು. ಇದೀಗ ಕಾಮಗಾರಿ ವೇಳೆ ವಿಗ್ರಹಗಳು ದೊರೆತಿವೆ. ಈ ವಿಗ್ರಹಗಳು 11ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿವೆ ಎಂದಿದ್ದಾರೆ.