ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಗಡ್ಡಿ ಗ್ರಾಮದಲ್ಲಿ ನ.22ರ ಮಂಗಳವಾರ ರಾತ್ರಿ 11.00 ಗಂಟೆಗೆ ಏಳು ವರ್ಷದ ಕರಡಿಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಕಳೆದ ಹಲವು ತಿಂಗಳಿಂದ ಗಡ್ಡಿ, ಉಡುಮಕಲ್, ಆಗೋಲಿ, ವಿಟ್ಲಪುರ, ಬೆಣಕಲ್ ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಜಮೀನಿಗೆ ಹೋಗಿ ಬೆಳೆ ರಕ್ಷಣೆ ಮಾಡುವವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆಗಳು ನಡೆಯುತ್ತಿವೆ.
ಸಾರ್ವಜನಿಕರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಗಡ್ಡಿ ಗ್ರಾಮ ಸೇರಿದಂತೆ ಹಲವೆಡೆ ಬೋನು ಇಟ್ಟು ಕರಡಿ, ಚಿರತೆ ಸೆರೆಗೆ ಯೋಜನೆ ರೂಪಿಸಿತ್ತು. ಮಂಗಳವಾರ ರಾತ್ರಿ ಗಡ್ಡಿ ಗ್ರಾಮದಲ್ಲಿ ಕರಡಿ ಬೋನಿಗೆ ಬಿದ್ದಿತ್ತು.
ಸೆರೆ ಹಿಡಿದ ಕರಡಿಯನ್ನು ವೈದ್ಯಕೀಯ ಪರೀಕ್ಷೆಯ ನಂತರ ಬಳ್ಳಾರಿ ಜಿಲ್ಲೆಯ ಗುಡೇಕೋಟೆ ಕರಡಿಧಾಮಕ್ಕೆ ಬಿಡಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ತಿಳಿಸಿದ್ದಾರೆ.