ಕೊಪ್ಪಳ: ದ್ವಿಚಕ್ರವಾಹನ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸಂಸದ ಸಂಗಣ್ಣ ಕರಡಿ ಸಹೋದರ ಬಸವರಾಜ ಕರಡಿ (58) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಟಣಕನಕಲ್ ಗ್ರಾಮದ ಬಳಿ ನಡೆದಿದೆ.
ಮೃತ ಬಸವರಾಜ ಕರಡಿ ಅವರು ಕೊಪ್ಪಳದಿಂದ ಟಣಕನಕಲ್ಗೆ ಹೋಗುತ್ತಿದ್ದರು. ಯಲಮಗೇರಿಯಿಂದ ಕೊಪ್ಪಳಕ್ಕೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸವರಾಜ ಕರಡಿ ಅವರಿಗೆ ಅಪಘಾತವಾದ ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಬಸವರಾಜ ಕರಡಿ ಮೃತದೇಹವನ್ನು ಟಣಕನಕಲ್ ಗ್ರಾಮ ಅವರ ನಿವಾಸ ದಲ್ಲಿ ಅಂತಿಮ ದರ್ಶನ ಇಡಲಾಗಿತ್ತು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಉದಯ್ ರವಿ, ಮಾಜಿ ಸಂಸದ ವಿರೂಪಾಕ್ಷಪ್ಪ ಸೇರಿ ಹಲವರು ಅಂತಿಮ ದರ್ಶನ ಪಡೆದರು.
ಸೋಮವಾರ ಸಂಜೆ ಹನುಮನಹಳ್ಳಿ ಗ್ರಾಮದ ತೋಟದಲ್ಲಿ ಬಸವರಾಜ ಕರಡಿಯವರ ಅಂತ್ಯಕ್ರಿಯೆ ನಡೆಯಿತು.