ಕಲಬುರಗಿ: ಬೀದಿ ನಾಯಿಗಳ ಹಾವಳಿ ತಡೆಯಬೇಕು ಎಂದು ಆಗ್ರಹಿಸಿ ರೋಜಾ ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ನಗರದ ಟೌನ್ಹಾಲ್ ಎದುರು ಪ್ರತಿಭಟನೆ ನಡೆಸಿದರು.
ಐದು ವರ್ಷಗಳ ಹಿಂದೆ ಒಂದೇ ದಿನ 30ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿದ್ದವು. ಆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರು ನಾಯಿ ದಾಳಿಗೆ ಒಳಗಾದವರಿಗೆ ಪರಿಹಾರ ನೀಡಿದ್ದರು. ಕೇರಳದಿಂದ ವಿಶೇಷ ತಂಡವನ್ನು ಕರೆಯಿಸಿ ನಾಯಿಗಳನ್ನು ಹಿಡಿದು ಸಂತಾನ ಹರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇಂದಿಗೂ ಆ ಭರವಸೆಯನ್ನು ಈಡೇರಿಸಿಲ್ಲ. ನಗರದಲ್ಲಿ ದಿನದಿಂದ ದಿನಕ್ಕೆ ನಾಯಿ ದಾಳಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ರೋಜಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ನಯಿಂ ಖಾನ್ ಕಳವಳ ವ್ಯಕ್ತಪಡಿಸಿದರು.
ಮತ್ತಷ್ಟು ಪ್ರಕರಣಗಳು ನಡೆಯಲು ಅವಕಾಶ ನೀಡಬಾರದು. ನಾಯಿಗಳ ಸಂತಾನ ಹರಣ ಮಾಡುವವರೆಗೂ ಅವುಗಳನ್ನು ಹಿಡಿದು ನಗರದ ಹೊರವಲಯದಲ್ಲಿ ಬಿಟ್ಟು ಬರಬೇಕು. ಇಲ್ಲದಿದ್ದರೆ ಮಹಾನಗರ ಪಾಲಿಕೆ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.