ಕಲಬುರಗಿ: ಜಿಲ್ಲಾ ಕೇಂದ್ರ ಕಲಬುರಗಿಯಿಂದ 30 ಕಿ.ಮೀ. ದೂರದಲ್ಲಿರುವ ಕಡಗಂಚಿ ಗ್ರಾಮದ ಹೊರವಲಯದ 50 ಎಕರೆ ಜಮೀನಿನ ಪೈಕಿ 30 ಎಕರೆ ಗುಡ್ಡುಗಾಡು ಪ್ರದೇಶವನ್ನು ಉಳುಮೆ ಯೋಗ್ಯ ಮಾಡಿ ತರಹೇವಾರಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಭೂಸನೂರ ಸಹೋದರರು ಮಾದರಿಯಾಗಿದ್ದಾರೆ.
ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಅಪರೂಪವಾಗಿರುವ ಅಂಜೂರ, ಮಾವು, ಪೇರಲ, ಡ್ರ್ಯಾಗನ್ ಫ್ರೂಟ್, ಸೀತಾಫಲ, ನಿಂಬೆ, ತೆಂಗು, ಗಜನಿಂಬೆ, ವಾಟರ್ ಆಯಪಲ್, ಸಿಹಿ ಹುಣಸೆ, ಚೆರ್ರಿ, ಹಲಸು, ನೇರಳೆ, ಸೇಬು, ರಾಮ ಫಲ, ಲಕ್ಷ್ಮಣ ಫಲ, ನುಗ್ಗೆ, ಬಿಲ್ವಪತ್ರೆ, ಅತ್ತಿಮರ ಸೇರಿದಂತೆ ತರಹೇವಾರಿ ಸಸಿಗಳನ್ನು ನೆಡಲಾಗಿದೆ.
ಅದರಲ್ಲೂ ಮುಖ್ಯವಾಗಿ 1,800 ಅಂಜೂರ, 1200 ಸೀತಾಫಲ, 500 ಮಾವು, 350 ಪೇರಲ, 350 ನಿಂಬೆ ಸಸಿಗಳನ್ನು ನೆಡಲಾಗಿದ್ದು ಫಸಲು ಬರಲು ಶುರುವಾಗಿದೆ.
ಹಿರಿಯ ಅಣ್ಣ ಹಣಮಂತರಾವ್ ಭೂಸನೂರ ಅವರು ಪ್ರತಿ ಬಾರಿ ಬೆಂಗಳೂರಿನ ನರ್ಸರಿಗಳಿಂದ ಸಸಿಗಳನ್ನು ತಂದು ಕೊಡುತ್ತಾರೆ. ಅವುಗಳನ್ನು ನಿರ್ವಹಣೆ ಮಾಡುವ ಹೊಣೆ ತಮ್ಮ ಗುಂಡೇರಾಯ ಭೂಸನೂರ ಅವರದು. ಜಮೀನಿನಲ್ಲಿ ಒಂದು ಬಾವಿಯಿದ್ದು, ಮೂರು ಬೋರ್ವೆಲ್ಗಳಿವೆ. ಇಡೀ 50 ಎಕರೆಗೆ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಜಮೀನಿನ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಲಾಗಿದೆ. ಅಷ್ಟಾಗಿಯೂ ಇಲ್ಲಿನ ಫಸಲನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿಲ್ಲ ಎನ್ನುತ್ತಾರೆ ಹೊಲದ ಮಾಲೀಕ ಹಣಮಂತರಾವ್ ಭೂಸನೂರ.ಹೊಲದಲ್ಲಿ ಮನೆಯನ್ನು ಕಟ್ಟುತ್ತಿದ್ದು, ಅದು ಮುಗಿದ ಬಳಿಕವಷ್ಟೇ ನಮ್ಮ ಫಸಲನ್ನು ಮಾರಾಟ ಮಾಡುತ್ತೇವೆ. ಅಲ್ಲಿಯವರೆಗೆ ತೋಟ ನೋಡಲು ಬರುವವರು, ಇಲ್ಲಿ ಕೆಲಸ ಮಾಡುವವರು ತಿನ್ನಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎನ್ನುತ್ತಾರೆ ಗುಂಡೇರಾಯ.
ಅಂಜೂರ, ಮಾವಿನ ಫಸಲನ್ನು ಕಲಬುರಗಿಯ ಅಪ್ಪನ ಗುಡಿ ಸೇರಿದಂತೆ ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳ ಮಠಗಳಿಗೆ ನೀಡಿದ್ದೇವೆ. ಮುಂದೆ ಉತ್ತಮ ಇಳುವರಿ ಬಂದಾಗ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ.
ಅಂಜೂರ, ಮಾವು ಬೆಳೆಯುವುದಕ್ಕೂ ಮುನ್ನ ಇಲ್ಲಿ 1,000 ಹೆಬ್ಬೇವಿನ ಮರವನ್ನು ಬೆಳೆಸಿದ್ದರು. 10 ವರ್ಷಗಳಾದ ಬಳಿಕ ಅವುಗಳನ್ನು ಕಟಾವು ಮಾಡಿ ಮಾರಾಟ ಮಾಡಿದ್ದಾರೆ.
‘ಎಲ್ಲಿಗಾದರೂ ಹೋದಾಗ ಹೊಸ ತಳಿಯ ಸಸಿ ಕಂಡರೆ ಅವುಗಳನ್ನು ನಮ್ಮಣ್ಣ ತಂದೇ ಬಿಡುತ್ತಾರೆ. ಇದೀಗ ಹೊಸ ಸಸಿ ತಂದರೆ ಎಲ್ಲಿ ಹಚ್ಚುವುದು ಎಂಬ ಚಿಂತೆಯಾಗಿದೆ’ ಎಂದು ಗುಂಡೇರಾಯ ಅವರು ಚಟಾಕಿ ಹಾರಿಸುತ್ತಾರೆ.
ಎರಡು ಸಣ್ಣ ಟ್ರ್ಯಾಕ್ಟರ್ಗಳನ್ನು ನೆಲ ಹದಗೊಳಿಸಲು, ಕಳೆ ತೆಗೆಯಲು, ಕೀಟನಾಶಕ ಸಿಂಪಡಿಸಿಕೊಳ್ಳಲು ಇರಿಸಲಾಗಿದ್ದು, ಇಡೀ 50 ಎಕರೆಗೆ ಇವುಗಳುಸಾಕಾಗುತ್ತವೆ. ಮುಂದಿನ ದಿನಗಳಲ್ಲಿ ಎರೆಹುಳು ಗೊಬ್ಬರ ಘಟಕವನ್ನು ಆರಂಭಿಸುವ ಯೋಜನೆಯೂ ಇದೆ ಎಂದು ತಮ್ಮ ಭವಿಷ್ಯದ ಯೋಜನೆಗಳನ್ನು ಮುಂದಿಡುತ್ತಾರೆ.