ಕಲಬುರಗಿ: `ಹೆಣ್ಣು ಒಳಗದಲ್ಲಿ ಹೆಚ್ಚಿನ ಗರತಿ… ಏನ್ ಹೇಳಲಿ ಮಹಿಮಾ… ಧರಣಿ ಮೇಲೆ ಶಿವಶರಣೆ ಎನ್ನಿಸಿದಳು ಹೆಮ್ಮರಡ್ಡಿ ಮಲ್ಲಮ್ಮ” ಈ ಗೀಗೀ ಪದ ಹಾಡಿನ ಮೂಲಕ ಕಲಾಲೋಕದಲ್ಲಿ ಮನೆ ಮಾತಾಗಿರುವ ಜಾನಪದ ಕಲಾವಿದೆ ಶಕುಂತಲಾ ದೇವಲನಾಯಕ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡು ಜನಪದ ಲೋಕ ಶ್ರೀಮಂತಗೊಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ತರಿತಾಂಡಾ ಮೂಲದ ಜಾನಪದ ಕಲಾವಿದೆ ಶಕುಂತಲಾ ಕಡುಬಡತನದಲ್ಲಿ ಹುಟ್ಟಿ, ಯಾರ ರಾಜಾಶ್ರಯವಿಲ್ಲದೆ ಜನಪದ ಲೋಕದಲ್ಲಿ ಮಿಂಚುಳ್ಳಿಯಾಗಿ ಗುರುತು ಹಿಡಿಯುವಷ್ಟು ಬೆಳೆದ ಅಪ್ಪಟ್ಟ ಗ್ರಾಮೀಣ ಪ್ರತಿಭೆ. ಕಲೆಯೇ ವೃತ್ತಿಯಾಗಿಸಿಕೊಂಡು ಮೂರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದಾರೆ.
ಶ್ರೀ ಶರಣಬಸವೇಶ್ವರ, ಹೇಮರಡ್ಡಿ ಮಲ್ಲಮ್ಮ, ಘತ್ತರಗಾ ಭಾಗ್ಯವಂತಿ ದೇವಿ, ಸರಸ್ವತಿ, ತಿಂಥಣಿ ಮೌನೇಶ್ವರ, ಸಂತ ಸೇವಾಲಾಲ ಹೀಗೆ ಅನೇಕ ದೇವಾನು ದೇವತೆಗಳ ಜೀವನ ಚರಿತ್ರೆಯನ್ನು ಗೀಗೀ ಪದಗಳ ರಚಿಸಿ ಹಾಡುವ ಮೂಲಕ ಜನಪದ ಸಾಹಿತ್ಯ ಗಟ್ಟಿಗೊಳಿಸಿದ್ದಾರೆ. ನಿತ್ಯ ನಿರಂತರ 30 ರಿಂದ 35 ವರ್ಷಗಳ ಜನಪದ ಲೋಕದಲ್ಲಿ ಗೀಗೀ ಪದ, ಆಕಾಶವಾಣಿ, ದೂರದರ್ಶನ ಕಲಾವಿದೆಯಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಸಹ ಸಿಗುತ್ತಿದೆ. ಜಾನಪದಅಕಾಡೆಮಿಯ ವಾರ್ಷಿಕ ಪ್ರಶಸ್ತಿ-2022 ಸೇರಿ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಅಭಿನಂದನಾ ಪತ್ರ ಹಾಗೂ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿವೆ. 1999 ರಲ್ಲಿ ಜನಪದ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಜನಪದ ಸೇವೆಗೈದಿದ್ದಾರೆ.
ಇಂದಿನ ಪಾಶ್ಚಾತ್ಯ ಸಂಸ್ಕೃತಿ, ಸಂಗೀತ ಭರಾಟೆ ಮಧ್ಯೆ ದೇಸಿ ಸಂಗೀತ, ದೇಸಿ ಜನಪದ ಕಲೆಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಜನಪದ ಕಲೆ ಗುರುತಿಸಿದೆ. ಯಾವುದೇ ಓದು-ಬರಹ, ಸಂಶೋಧನೆ ಮಾಡದೆ ಜನರ ಆಡುಭಾಷೆಯಿಂದಲೇ ಹುಟ್ಟಿಕೊಂಡ ಜನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹ ಸಿಗಬೇಕಿದೆ.
ನಾನು ಸಣ್ಣವಳಿದ್ದಾಗ ಹೆತ್ತ ತಂದೆ ಊರು ಕೇರಿಗೆ ಹೋಗಿ ಗೀಗೀ ಪದ ಹಾಡುತ್ತಾ ಜನರನ್ನು ರಂಜಿಸುತ್ತಿದ್ದರು. ಇದರಿಂದ ಅವರ ದಾಟಿ, ರಾಗ ಕಲಿತು ತಂದೆಯ ಹಾದಿಯಲ್ಲಿ ಸಾಗಿದೆ. ನನಗೆ ನನ್ನ ತಂದೆಯೇ ಪ್ರೇರಣೆ. ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ತುಂಬಾ ಸಂತೋಷತಂದಿದೆ ಎನ್ನುತ್ತಾರೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶಕುಂಲಾ ದೇವಲನಾಯಕ.