ಕಲಬುರಗಿ: ಸೇಡಂ ತಾಲ್ಲೂಕಿನ ಕೋಡ್ಲಾ (ಬಿ) ಗ್ರಾಮದ ರೈತ ಸೋಮನಾಥರೆಡ್ಡಿ ಪೂರ್ಮಾ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆಗಸ್ಟ್ 15, 1954ರಲ್ಲಿ ಜನಿಸಿದ ಇವರು ಎಸ್ಎಸ್ಎಲ್ಸಿ ಪೂರೈಸಿದ್ದಾರೆ. ಸುಮಾರು 50 ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿ ಸಾಧನೆ ಮಾಡಿದ್ದಾರೆ. ಕೃಷಿ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಸರ್ಕಾರ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸೋಮನಾಥ್ ಅವರು ಕೃಷಿಯಲ್ಲಿ ಅಂತರ ಬೆಳೆ ಬೇಸಾಯ, ಮಿಶ್ರ ಕೃಷಿ ಮಾದರಿಯಲ್ಲಿ ತೊಗರಿ, ಸಿರಿಧಾನ್ಯಗಳನ್ನು ಬೆಳೆದು ಹೆಚ್ಚು ಇಳುವರಿ ಪಡೆದಿದ್ದಾರೆ. ರಾಸಾಯನಿಕ ರಸಗೊಬ್ಬರ ಬಳಕೆಯ ಈ ಕಾಲದಲ್ಲಿಯೂ ಅವರು ಜಮೀನಿಗೆ ಶುದ್ಧ ತಿಪ್ಪೆಗೊಬ್ಬರ ಹಾಗೂ ಗೋಮೂತ್ರದ ಸಾವಯವ ಸಾರ ಬಳಕೆ ಮಾಡುತ್ತಿದ್ದಾರೆ. ಕಡಿಮೆ ತೇವಾಂಶ ಇದ್ದರೂ ಹೆಚ್ಚಿನ ಇಳುವರಿ ಪಡೆದಿದ್ದಾರೆ.
ಸಾವಯವ ಕೃಷಿಗೆ ಒತ್ತು ನೀಡುವ ಅವರು ಎರೆಹುಳು ಗೊಬ್ಬರ ತಯಾರಿಕೆ, ಮಳೆ ನೀರಿನ ಕೊಯ್ಲು, ಜೈವಿಕ ಡೈಜಿಸ್ಟರ್ ಹಾಗೂ ಮಣ್ಣಿನ ಮಾಲಿನ್ಯ ತಪ್ಪಿಸಲು ಕೀಟನಾಶಕ ಬಳಕೆ ವಿಧಾನಗಳ ಕುರಿತು ಜನರಿಗೆ ಮಾಹಿತಿ ನೀಡಿದ್ದಾರೆ. ಹಿಂದಿನ ವರ್ಷದ ಬೆಳಗಳ ಅವಶೇಷಗಳನ್ನು ಬಳಕೆ ಮಾಡಿ ಹೆಚ್ಚುವರಿ ಇಳುವರಿ ಪಡೆಯುವಲ್ಲಿ ಅವರು ಸಫಲರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಹಲವಾರು ಪ್ರಶಸ್ತಿ ಲಭಿಸಿದೆ.
2002ರಲ್ಲಿ ಕೇಂದ್ರ ಸರ್ಕಾರದ ಐಸಿಎಆರ್ನಿಂದ ನೀಡುವ ಕೃಷಿ ವಿಷಾರದ ಪ್ರಶಸ್ತಿ, 2006ರಲ್ಲಿ ಕೃಷಿ ಪಂಡಿತ ಪ್ರಶಸ್ತಿ, 2011ರಲ್ಲಿ ಕೃಷಿ-ಖುಷಿ ಪ್ರಶಸ್ತಿ, ದೂರದರ್ಶನ ಚಂದನ ಪ್ರಶಸ್ತಿ, ಡಾ.ಜಿ.ಮಾದೇಗೌಡ ಪ್ರತಿಷ್ಠಾನದ ಪ್ರಶಸ್ತಿ, ಶ್ರೀಚನ್ನರತ್ನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.
‘ರಾಜ್ಯ ಸರ್ಕಾರ ಹಳ್ಳಿಯಲ್ಲಿ ಇರುವ ರೈತನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿವುದು ಖುಷಿ ತಂದಿದೆ. ಕೃಷಿಯಲ್ಲಿ ಮಾಡಿದ ಸಾಧನೆಗೆ ಪ್ರಶಸ್ತಿ ನೀಡುತ್ತಿರುವ ಸರ್ಕಾರಕ್ಕೆ ಅಭಿನಂದನೆಗಳು’ ಎಂದು ರೈತ ಸೋಮನಾಥ್ ರೆಡ್ಡಿ ಪೂರ್ಮಾ ಅವರು ತಿಳಿಸಿದರು.