ಕಲಬುರಗಿ: ವಾಡಿ ತಾಲೂಕಿನತರಕಸ್ಪೇಟ್ ಗ್ರಾಮದಲ್ಲಿ ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸುವ ವೇಳೆ ಅಸ್ವಸ್ಥಗೊಂಡು 5 ದಿನದ ನಂತರ ಪ್ರಾಣ ತೆತ್ತ ಘಟನೆ ಮಾಸುವ ಮುನ್ನವೇ ಹಲಕರ್ಟಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಮೈಗೆ ಕೀಟನಾಶಕ ತಗುಲಿದ ಕಾರಣ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಶನಿವಾರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲಕರ್ಟಿ ಗ್ರಾ.ಪಂ. ವ್ಯಾಪ್ತಿಯ ಆರ್.ಬಿ. ನಗರ ತಾಂಡಾದ ಸುನೀಲ ಜಾಧವ (34), ಅನಿಲ ಜಾಧವ (22), ಕುಮಾರ ಪಾಪಣ್ಣ (30) ಹಾಗೂ ಖೇಮು ರಾಠೋಡ (32) ಎಂಬ ರೈತರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ನಾಲ್ಕು ಜನ ರೈತರು ಒಟ್ಟಾಗಿ ಹತ್ತಿ ಬೆಳೆಗೆ ತಗುಲಿದ ರೋಗ ನಿಯಂತ್ರಣಕ್ಕೆ ಗುರುವಾರ ಬೆಳಿಗ್ಗೆ ಮೋನೋಕ್ರೋಟ್ ಪಾಸ್ ಹಾಗೂ ಲಾನ್ಸರ್ ಗೋಲ್ಡ್ ಎಂಬ ಹೆಸರಿನ ಕೀಟನಾಶಕ ತೆಗೆದುಕೊಂಡು ಬೆಳೆಗೆ ಸಿಂಪಡಿಸಿ ನಂತರ ಮನೆಗೆ ಮರಳಿದ್ದಾರೆ. ಸಂಜೆ ಸಣ್ಣದಾಗಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ತಲೆಸುತ್ತು, ವಾಂತಿಭೇದಿ ಕಾಣಿಸಿಕೊಂಡಿದೆ. ಸ್ಥಳೀಯ ಆಸ್ಪತ್ರೆಗೆ ತೋರಿಸಿ ಮರುದಿನ ಕಲಬುರಗಿಗೆ ಹೋಗುವ ಯೋಚನೆ ಮಾಡಿದ್ದೇ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದು ರೋಗಗಳು ಉಲ್ಬಣಗೊಂಡಾಗ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗುತ್ತಿದ್ದು ಕುಟುಂಬಸ್ಥರ ಆತಂಕಕ್ಕೆಕಾರಣವಾಗಿದೆ.
ಕೀಟನಾಶಕ ಸಿಂಪಡಣೆ ವೇಳೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ವಿಷಪೂರಿತ ಕೀಟನಾಶಕದಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ನಾಲ್ಕು ಜನ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಕೀಟನಾಶಕದ ಬಗ್ಗೆ ಅನುಮಾನವಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಸ್ಥಳೀಯ ಮುಖಂಡ ಗೋವಿಂದ ಜಾಧವ ಒತ್ತಾಯಿಸಿದ್ದಾರೆ.