ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್ಡಿಬಿ) ‘ಅಕ್ಷರ ಆವಿಷ್ಕಾರ’ ಯೋಜನೆಗೆ ₹652.5 ಕೋಟಿ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗಕ್ಕೆ ಸೂಚಿಸಿದೆ.
ಕೆಕೆಆರ್ಡಿಬಿಯು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ಹಣೆಪಟ್ಟಿಯಿಂದ ಹೊರತರಲು ಹಾಗೂ ಶಾಲೆಗಳಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲು ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತಂದಿದೆ.
ಇದರ ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಕಾರ್ಯಕ್ಷಮತೆ ಸುಧಾರಿಸಿ, ರಾಜ್ಯ ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ಗುರಿಯೂ ಹಾಕಿಕೊಂಡಿದೆ.
ಅಕ್ಷರ ಆವಿಷ್ಕಾರಕ್ಕಾಗಿಯೇ ಕೆಕೆಆರ್ಬಿಡಿಯು ತನ್ನ ಒಟ್ಟಾರೆ ಅನುದಾನದಲ್ಲಿ ಶೇ 25ರಷ್ಟು ಖರ್ಚು ಮಾಡಲಿದೆ. 2023-24ನೇ ಸಾಲಿನಲ್ಲಿ ₹652 ಕೋಟಿ ಅನುದಾನಕ್ಕಾಗಿ ಶಿಕ್ಷಣ ಇಲಾಖೆಯು ಕ್ರಿಯಾ ಯೋಜನೆ ರೂಪಿಸಬೇಕಿದೆ.
ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏಳು ಜಿಲ್ಲೆಗಳಿಗೆ ₹652.5 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಮೈಕ್ರೊ ಯೋಜನೆಗಳಿಗೆ ₹456.75 ಕೋಟಿ (ಶೇ 70ರಷ್ಟು) ಮತ್ತು ಮ್ಯಾಕ್ರೊ ಯೋಜನೆಗಳಿಗೆ ₹195.75 ಕೋಟಿ (ಶೇ 30ರಷ್ಟು) ನಿಗದಿಪಡಿಸಿದೆ ಎಂಬುದು ತಿಳಿದು ಬಂದಿದೆ.’ಮ್ಯಾಕ್ರೊ ಯೋಜನೆಗಳ ಕ್ರಿಯಾ ಯೋಜನೆಯನ್ನು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದ ಸಮಿತಿಗಳು ಸಿದ್ಧಪಡಿಸಿದರೆ, ಮೈಕ್ರೊ ಯೋಜನೆಗಳ ಕ್ರಿಯಾ ಯೋಜನೆಯನ್ನು ಆಯಾ ಕ್ಷೇತ್ರದ ಶಾಸಕರ ನೇತೃತ್ವದ ಸಮಿತಿಗಳು ತಯಾರಿಸಲಿವೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ತಲಾ 50 ಶಾಲೆಗಳನ್ನು ಆಯ್ದುಕೊಳ್ಳಲಾಗುತ್ತದೆ. ಅತಿಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ
ಮೊದಲ ಆದ್ಯತೆ ಇರಲಿದೆ. ಜೂನಿಯರ್ ಕಾಲೇಜುಗಳ ಆಯ್ಕೆಗೂ ಅವಕಾಶ ನೀಡಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
‘ಕ್ರಿಯಾ ಯೋಜನೆಯು ಎರಡು ವಿಧದ ಘಟಕಗಳನ್ನು ಹೊಂದಿದೆ. ಹಾರ್ಡ್ ಘಟಕದಲ್ಲಿ ಶಾಲಾ ಕಟ್ಟಡ, ತರಗತಿ ಕೋಣೆಗಳು, ಶೌಚಾಲಯ ನಿರ್ಮಾಣ, ತರಗತಿಗಳ ದುರಸ್ತಿ, ಆಟದ ಮೈದಾನ ಮತ್ತು ಬಿಸಿಯೂಟದ ಕೋಣೆಗಳ ನಿರ್ಮಾಣ ಹಾಗೂ ಸಾಫ್ಟ್ ಘಟಕದಲ್ಲಿ ಶಾಲಾ ಪ್ರಯೋಗಾಲಯಗಳ ಉಪಕರಣಗಳು,ಗ್ರಂಥಾಲಯ, ಡಿಜಿಟಲ್ ತರಗತಿ, ಬಾಲ್ಯಾರಂಭದ ಪೋಷಣೆ ಮತ್ತು ಕಲಿಕೆ, ಶಿಕ್ಷಕರ ಕಲಿಕಾ ಕೇಂದ್ರಗಳನ್ನು ಒಳಗೊಂಡಿವೆ’ ಎಂದರು.
‘ಆಯಾ ಕ್ಷೇತ್ರದ ಬಿಇಒಗಳು ಶಾಲೆಗಳಿಗೆ ಬೇಕಾದ ಅಗತ್ಯಗಳನ್ನು ಪಟ್ಟಿಮಾಡಿ ಆಯಾ ಕ್ಷೇತ್ರದ ಶಾಸಕರಿಗೆ ನೀಡಬೇಕು. ತಾಂತ್ರಿಕ ತಂಡ ಸಂಬಂಧಿತ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಶಾಲೆಗಳಿಗೆ ಹೊಸ ತರಗತಿ ಕೋಣೆ ಅವಶ್ಯಕತೆ ಇದ್ದರೆ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಪ್ರಮಾಣೀಕರಿಸಬೇಕು’ ಎಂದು ತಿಳಿಸಿದರು.