News Karnataka Kannada
Monday, May 13 2024
ಕಲಬುರಗಿ

ರೈಲ್ವೆ ಕಾಮಗಾರಿ ಬೇಗ ಮುಗಿಸುವಂತೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

Mallikarjuna Karge
Photo Credit :

ಕಲಬುರಗಿ : ಕಲಬುರಗಿ ನೂತನ ರೈಲ್ವೆ ವಿಭಾಗ ಸ್ಥಾಪನೆ ಸೇರಿದಂತೆ ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳನ್ನು ಬೇಗ ಮುಗಿಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಅವರು ಪತ್ರ ಬರೆದಿದ್ದಾರೆ.

ರೈಲ್ವೆ ವಿಭಾಗ: ಹಿಂದುಳಿದ ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಕೇಂದ್ರ ರೈಲ್ವೆ ವಿಭಾಗ, ದಕ್ಷಿಣ ಮಧ್ಯೆ ರೈಲ್ವೆ ವಿಭಾಗ ಹಾಗೂ ನೈಋತ್ಯ ವಿಭಾಗದೊಂದಿಗೆ ಬೆಸೆಯುವ ಉದ್ದೇಶದಿಂದ ಕಲಬುರಗಿಗೆ ಪ್ರತ್ಯೇಕ ರೈಲ್ವೆ ವಿಭಾಗವನ್ನು 2014ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ₹5 ಕೋಟಿ ಅನುದಾನ ಒದಗಿಸಿದ್ದಲ್ಲದೇ, ಕಚೇರಿ ನಿರ್ವಹಣೆ ನೋಡಿಕೊಳ್ಳಲು ವಿಶೇಷ ಅಧಿಕಾರಿಯನ್ನೂ ನೇಮಿಸಲಾಗಿತ್ತು.

ರಾಜ್ಯ ಸರ್ಕಾರ ಉಚಿತವಾಗಿ 32 ಎಕರೆ ಭೂಮಿ ಒದಗಿಸಿತ್ತು. ಈಗಲೂ ಕೂಡಾ ಆ ಭೂಮಿ ರೈಲ್ವೆ ಇಲಾಖೆಯ ಒಡೆತನದಲ್ಲಿದೆ. ಆದರೂ, ರೈಲ್ವೆ ಪ್ರಾಧಿಕಾರ ರೈಲ್ವೆ ವಿಭಾಗ ಸ್ಥಾಪನೆ, ಅಧಿಕಾರಿಗಳ ವಸತಿಗೃಹಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿಲ್ಲ ಎಂದು ಖರ್ಗೆ ದೂರಿದ್ದಾರೆ.

ಬೋಗಿ ಕಾರ್ಖಾನೆ: ಯಾದಗಿರಿ ಜಿಲ್ಲೆ ಕಡೇಚೂರು ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ 2014ರಲ್ಲಿ ಬೋಗಿ ಕಾರ್ಖಾನೆ ಮಂಜೂರಾಗಿತ್ತು. ಸದ್ಯ ಅದೊಂದು ಸಣ್ಣ ಪ್ರಮಾಣದ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಿರುವ ಕಾರ್ಖಾನೆಯನ್ನು ವಿಸ್ತರಿಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸುಮಾರು 150 ಎಕರೆ ಜಮೀನನ್ನು ಒದಗಿಸಿತ್ತು.

ಏಳು ವರ್ಷ ಗತಿಸಿದರೂ ಸಹ ರೈಲ್ವೆ ಬೋಗಿ ಕಾರ್ಖಾನೆ ವಿಸ್ತರಣೆ ಕಾರ್ಯಕ್ಕೆ ಕ್ರಮ ಕೈಗೊಂಡಿಲ್ಲ. ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಈ ಕಾರ್ಖಾನೆಯ ವಿಸ್ತರಣೆ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಗದಗ-ವಾಡಿ ನೂತನ‌ ಮಾರ್ಗ: ಬೆಂಗಳೂರು- ಮುಂಬೈ ರೈಲ್ವೆ ಮಾರ್ಗವನ್ನು ಹೈದರಾಬಾದ್ (ದಕ್ಷಿಣ ಮಧ್ಯೆ ) ರೈಲ್ವೆ ಮಾರ್ಗದೊಂದಿಗೆ ಬೆಸೆಯುವ ಉದ್ದೇಶದಿಂದ ನೂತನ ಗದಗ- ವಾಡಿ ರೈಲು ಮಾರ್ಗವನ್ನು ಮಂಜೂರು ಮಾಡಲಾಗಿತ್ತು.

ನೂತನ ಮಾರ್ಗದ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದ್ದು, ಯೋಜನೆಗೆ ಬೇಕಾಗುವ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯಬೇಕಿದೆ. ಈ ಮಾರ್ಗದ ಸ್ಥಾಪನೆಗೆ ನಿಧಾನಗತಿ ಅನುಸರಿಸದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಿಟ್ ಲೈನ್: ಕಲಬುರಗಿ ರೈಲು ನಿಲ್ದಾಣದ ದಕ್ಷಿಣ ಹಾಗೂ ಉತ್ತರ ಭಾಗಕ್ಕೆ ಪಿಟ್ ಲೈನ್ ಸ್ಥಾಪನೆ ಕಾಮಗಾರಿ 2014 ರಲ್ಲೇ ಮಂಜೂರಾಗಿತ್ತು. ದಕ್ಷಿಣ ಭಾಗದ ಪಿಟ್ ಲೈನ್ ಕಾಮಗಾರಿ ಈಗಾಗಲೇ ಮುಗಿದಿದ್ದು, ಕಾರ್ಯನಿರ್ವಹಿಸುತ್ತಿದೆ. ಆದರೆ, ಉತ್ತರ ಭಾಗದ ಪಿಟ್ ಲೈನ್ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಈ ಕೂಡಲೇ ಸದರಿ‌ ಕಾಮಗಾರಿ ಮುಗಿಸಿದರೆ, ಬೀದರ್ ಕಡೆಯಿಂದ ಬರುವ ರೈಲುಗಳಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಭೀಮಾ ನದಿಯಿಂದ ನೀರು: ಕಲಬುರಗಿ ರೈಲು ನಿಲ್ದಾಣಕ್ಕೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ರೈಲ್ವೆ ಬೋಗಿಗಳನ್ನು ತೊಳೆಯುವ ಉದ್ದೇಶದಿಂದ ಭೀಮಾ ನದಿಯಿಂದ ನೀರು ಒದಗಿಸುವ ಯೋಜನೆ ಹೊಂದಲಾಗಿತ್ತು. ಈ ಕೆಲಸ ಕೂಡಾ ಪ್ರಾರಂಭಿಸಿಲ್ಲ. ಇದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು