ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕೈ ಹಾಕಿರುವರು ಇನ್ನೊಮ್ಮೆ ಮುಟ್ಟಿಕೊಳ್ಳಬೇಕು. ಯಾರೇ ಎಷ್ಟೋ ದೊಡ್ಡವರಿದ್ದರೂ ಸರ್ಕಾರ ಬಿಡುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಗುಡುಗಿದರು. ಪೊಲೀಸ್ ತರಬೇತಿ ಪ್ರರಿಕ್ಷಣಾರ್ಥಿಗಳ ನಿರ್ಗಮನ ಪಂಥ ಸಂಚಲನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಿಎಸ್ಐ ನೇಮಕಾತಿ ಹಗರಣವನ್ನು ಸರ್ಕಾರ ಬೇರು ಮಟ್ಟದ ತನಿಖೆ ನಡೆಸುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪುನರುಚ್ಚರಿಸಿದ ಸಚಿವರು, ಕಾಂಗ್ರೆಸ್ ನವರು ಸರಕಾರದ ಕೆಲ ಸಚಿವರ ತೇಜೋವಧೆ ಮಾಡುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಹಗರಣದಲ್ಲಿ ಪಾಲ್ಗೊಂಡವರ ವಿರುದ್ದ ಇದುವರೆಗೆ ಕಂಡರಿಯದ ನಿಟ್ಟಿನಲ್ಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣದಲ್ಲಿ 300 ಕೋಟಿ ಅಲ್ಲ 3000 ಕೋಟಿ ಆರೋಪ ಮಾಡಲಿ. ಮಾತಾಡಲು ಅವರಿಗೆ ವಾಕ್ ಸ್ವಾತಂತ್ರವಿದೆ. ದಾಖಲಾತಿ ಕೊಡಿ ಎಂದರೆ ಕಾಂಗ್ರೆಸ್ ಅವರು ಓಡಿಹೋಗುತ್ತಾರೆ. ಈ ಪ್ರಕರಣದಲ್ಲಿ ಬಹುತೇಕ ಸಿಲುಕಿದವರೇ ಕಾಂಗ್ರೆಸ್ ನವರು. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ವಿವರಣೆ ನೀಡಿದರು.