ಕಲಬುರಗಿ,ಮೇ. 2 : ಕುಟುಂಬ ರಾಜಕಾರಣ ಏಡ್ಸ್ ನಂತೆ ಎಲ್ಲಾ ಪಕ್ಷಗಳಲ್ಲೂ ಹಬ್ಬಿದ್ದು, ಇದರ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿಯಾನವನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಕುಟುಂಬ ರಾಜಕಾರಣದ ಬಗ್ಗೆ ಮೈಸೂರಿನಲ್ಲಿ ಬಿ.ಎಲ್.ಸಂತೋಷ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಂಶಪಾರಂಪರ್ಯ ರಾಜಕಾರಣಕ್ಕೆ ಇತಿಶ್ರಿ ಹಾಡುವ ಸಂಬಂಧ ಪ್ರಧಾನಿಯವರು ಕೈಗೊಂಡಿರುವ ಅಭಿಯಾನ ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.
ಒಂದೇ ಕುಟುಂಬದಲ್ಲಿ ಶಾಸಕ, ವಿಧಾನಪರಿಷತ್ ಸದಸ್ಯ, ಸಂಸದ ಸೇರಿ ನಾಲ್ಕಾರು ಜನಪ್ರತಿನಿಧಿಗಳಾಗುವ ಸಂಪ್ರದಾಯ ಹೋಗಬೇಕು.ಲಾಬಿ ಮಾಡುವವರಿಗೆ, ಶಕ್ತಿ ಪ್ರದರ್ಶ ಮಾಡುವವರು, ಹಣ ಬಲ, ತೋಳ್ಬಲ ಪ್ರದರ್ಶನ ಮಾಡುವುದು ಬಿಜೆಪಿಯಲ್ಲಿ ನಡೆಯುವುದಿಲ್ಲ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ ರಾಜನಾಥ್ಸಿಂಗ್ ಅವರ ಮಗನನ್ನು ನಮ್ಮ ಪಕ್ಷ ಮಂತ್ರಿ ಮಾಡಿಲ್ಲ. ಇದರಿಂದ ನಮ್ಮಲ್ಲೂ ಕೆಲವರಿಗೆ ನಡುಕ ಶುರುವಾಗಿದೆ. ಅಂತಹವರೆಲ್ಲಾ ಜಾಕೆಟ್ ತೆಗೆದಿಟ್ಟು ಕೈಗಾರಿಕೆ ಮಾಡಿಕೊಂಡು ಇರಲಿ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ರಾಜಕಾರಣದಲ್ಲಿ ಅವಕಾಶ ಸಿಗಲಿ ಎಂದು ತಿಳಿಸಿದರು.
ರಾಷ್ಟ್ರೀಯವಾದಿ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಹೇಳಿದಂತೆ ನಡೆದುಕೊಳ್ಳಲಿ ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಸಿದ ಯತ್ನಾಳ್, ಪ್ರಿಯಾಂಕ್ ಖರ್ಗೆ ಅವರೇ ಈ ವಿಚಾರದಲ್ಲಿ ಬಿಜೆಪಿಗೆ ನೀವೇ ಆದರ್ಶವಾಗಿ. ಕುಟುಂಬ ರಾಜಕಾರಣದ ಅಭಿಯಾನ ನಿಮ್ಮಿಂದಲೇ ಶುರುವಾಗಲಿ. ನೀವಾದರೂ ನಿವೃತ್ತಿಯಾಗಿ. ಅಥವಾ ನಿಮ್ಮ ತಂದೆಯನ್ನಾದರೂ ನಿವೃತ್ತಿ ಮಾಡಿಸಿ ಮಾದರಿಯಾಗಿ ಎಂದು ಟೀಕಿಸಿದರು.
ನನ್ನ ಮೇಲೆ ಸ್ವಾಮೀಜಿಗಳ ಆಶೀರ್ವಾದ ಕಡಿಮೆಯಾಗಿದೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾಮೀಜಿಗಳ ಆಶೀರ್ವಾದ ಕೂಡ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಅವರ ಬೇಡಿಕೆಗಳು ಕೂಡ ಹೆಚ್ಚಾಗುತ್ತಿರುತ್ತವೆ ಎಂದು ಹೇಳಿದರು.