ಯಡ್ರಾಮಿ (ಕಲಬುರಗಿ ಜಿಲ್ಲೆ) : ತಾಯಿಯ ಅನಾರೋಗ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೇಸತ್ತಿದ್ದ ಮಗ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಬಿಳವಾರ ಗ್ರಾಮದ ಭೀಮಾಶಂಕರ ಎಂಬಾತ ತಾಯಿ ರಾಚಮ್ಮ ಶರಬಣ್ಣ ಯಳಿಮೇಲಿ (60) ಅವರನ್ನು ಸ್ನೇಹಿತನ ಸಹಾಯದಿಂದ ವಾರದ ಹಿಂದೆಯೇ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಸಮೀಪದ ಭೀಮಾನದಿ ಹತ್ತಿರಕ್ಕೆ ಕರೆ ತಂದು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ.
ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಗ ಭೀಮಾಶಂಕರ ಮತ್ತು ಆತನ ಸ್ನೇಹಿತ ಸೇರಿ ಬೈಕ್ ಮೇಲೆ ಕರೆದುಕೊಂಡು ಬಂದು ನದಿಯಲ್ಲಿ ಮುಳುಗಿಸಿ ಕೊಂದು, ಶವವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಸಂಬಂಧಿಕರೊಬ್ಬರು ಮಾರ್ಚ್ 29ರಂದು ಭೀಮರಾಯನ ಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂಶಯ ಬಂದು ‘ಅಜ್ಜಿಯನ್ನು ಎಲ್ಲಿ ಬಿಟ್ಟು ಬಂದಿದ್ದೀಯಾ ಎಂದು ಗದರಿಸಿ ಕೇಳಿದಾಗ ಆರೋಪಿ ಭೀಮಾಶಂಕರ ಸತ್ಯ ಬಾಯಿ ಬಿಟ್ಟಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಆಧರಿಸಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಪುತ್ರ ಭೀಮಾಶಂಕರನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೊಬ್ಬನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.