ಬೆಂಗಳೂರು : ಬಿಬಿಎಂಪಿ ಕಸದ ಲಾರಿಗೆ ಮತ್ತೊಬ್ಬರನ್ನ ಬಲಿ ಪಡೆದಿದೆ. 10 ದಿನದ ಹಿಂದಷ್ಟೇ ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿ ಅಕ್ಷಯ ಮೇಲೆ ಕಸದ ಲಾರಿ ಹರಿದು ಆಕೆಯ ಸಾವಿಗೆ ಕಾರಣವಾಗಿತ್ತು, ಈ ಕಹಿ ಘಟನೆ ಮಾಟುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಗುರುವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಕಸದ ಲಾರಿ ಹರಿದಿದ್ದು, ಸ್ಥಳದಲ್ಲೇ ದರ್ಮಣಕ್ಕೀಡಾಗಿದ್ದಾರೆ. ರಾಮಯ್ಯ(60) ಮೃತರು. ದ್ವಿಚಕ್ರ ವಾಹನದಲ್ಲಿ ರಾಮಯ್ಯ ಹೋಗುತ್ತಿದ್ದರು. ಬೇಗೂರು ಕ್ರಾಸ್ ಬಳಿ ರೇವ ಯೂನಿರ್ವಸಿಟಿ ಮುಂಭಾಗ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ಕೆಳಕ್ಕೆ ಬಿದ್ದ ರಾಮಯ್ಯ ಅವರ ಮೇಲೆ ಲಾರಿಯ ಚಕ್ರ ಹರಿದಿದೆ. ಅಪಘಾತದ ಭೀಕರತೆಗೆ ರಾಮಯ್ಯರ ದೇಹ ಛಿದ್ರಗೊಂಡಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಮಾ.21ರಂದು ಶಾಲೆಯಿಂದ ಮನೆಗೆ ತೆರಳುತ್ತಿದ್ದ 12 ವರ್ಷದ ಬಾಲಕಿ ಅಕ್ಷಯ ಬಿ. ನರಸಿಂಹಮೂರ್ತಿ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದಿತ್ತು. ಸ್ಥಳದಲ್ಲೇ ಅಕ್ಷಯ ಮೃತಪಟ್ಟಿದ್ದಳು. ಈ ಘಟನೆ ಖಂಡಿಸಿ ಬಿಬಿಎಂಪಿ ವಿರುದ್ಧ ಮೃತಳ ಕುಟುಂಬಸ್ಥರು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ದುರ್ಘಟನೆ ಇನ್ನೂ ಹಸಿಯಾಗೇ ಇದೆ, ಇದೀಗ ಮತ್ತೊಂದು ದುರಂತ ಸಂಭವಿಸಿದೆ.