ಕಲಬುರಗಿ: ಅಫಜಲಪುರ ತಾಲೂಕಿನ ಮೂರು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬೈಪಾಸ್ ರಸ್ತೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು,ಒಂದು ಕಡೆ ಸಂತಸ ತಂದರೆ ಇನ್ನೊಂದು ಕಡೆ ರೈತರಿಗೆ ದುಃಖ ತರಿಸುತ್ತಿದೆ.ಏಕೆಂದರೆ ತಿಂಗಳುಗಳಿಂದ ತಾಲೂಕಿನ ಚೌಡಾಪುರ,ಬಳೂರ್ಗಿ,ಅಫಜಲಪುರ ಪಟ್ಟಣದಲ್ಲಿ ಬೈಪಾಸ್ ರಸ್ತೆಗಳು ನಡೆದಿದ್ದು,ರಸ್ತೆಯ ಪಕ್ಕದಲ್ಲಿನ ರೈತರು ತಮ್ಮ ಹೊಲಗಳಲ್ಲಿ ತುಂತುರು ಹನಿ ನೀರಾವರಿ ಬೇಸಾಯ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರೈತರಿಗೆ ಯಾವುದೇ ನೋಟಿಸ್ ನೀಡದೆ ಬೈಪಾಸ್ ರಸ್ತೆಗಳ ಕಾಮಗಾರಿ ಪ್ರಾರಂಬಿಸಿದ್ದಾರೆ ಎಂದು ಇಂಗಳಗಿ ಗ್ರಾಮದ ರೈತ ರವಿ ಸೈಬಣ್ಣಾ ಅಂಗಡಿ ಅವರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ 6 ಎಕರೆ ಹೊಲದಲ್ಲಿ ಕುಂಬಳಕಾಯಿ ಬೆಳೆ ಬೆಳೆದಿದ್ದೆನೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಯಿಗಳು ಆಗುವ ಹಂತದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದಾರೆ.
ಅದರಿಂದ ಧೂಳು ಹೆಚ್ಚಾಗಿ ಕುಂಬಳ ಕುಡಿಗಳ ಮೇಲೆ ಧೂಳು ಕೂತು ಒಣಗಿ ಹೊಗುತ್ತಿವೆ. ಸುಮಾರು ನಾಲ್ಕು ಲಕ್ಷ ಖರ್ಚು ಮಾಡಿ ಬೆಳೆ ಬೆಳೆದಿದ್ದೆನೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ರವಿ ಅಂಗಡಿ ಕಣ್ಣಿರು ಹಾಕುತ್ತಿದ್ದಾರೆ. ಈ ಮೊದಲು ರಸ್ತೆ ಮಾಡುವುದಾಗಿ ಯಾವುದೇ ನೋಟಿಸ್ ನೀಡಿಲ್ಲ. ನಾವು ನಮ್ಮ ಬೆಳೆ ಹಾಳಾಗುತ್ತಿದೆ ಪರಿಹಾರ ನೀಡಿ ಎಂದು ಕೇಳಿದರೆ ಯಾವೊಬ್ಬ ಅಧಿಕಾರಿಗಳು ಪರಿಗಣನೆ ಮಾಡುತ್ತಿಲ್ಲ.
ಈ ಬೆಳೆಯ ಫಸಲು ನಮ್ಮ ಕೈಗೆ ಬಾರದಿದ್ದರೆ ನಮ್ಮ ಜೀವನ ಬರಿದಾಗಿ ಹೋಗುತ್ತದೆ ಎಂದು ಬಡ ರೈತ ತನ್ನ ಅಳಲನ್ನು ತೊಡಿಕೊಂಡಿದ್ದಾನೆ. ಕೂಡಲೇ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಡ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ತಾಲೂಕಿನ ಜನರ ಒತ್ತಾಸೆಯಾಗಿದೆ.