ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಖಾತೆ ತೆರೆಯದ ಗ್ಯಾರಂಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಯಲ್ಲಿ ಮನವಿ ಮಾಡಿದರು.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಯಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ ಅವರು, ನಾನು ಹಲವಾರು ಗ್ಯಾರಂಟಿ ಕೊಟ್ಟಿರುವಾಗ ರಾಜ್ಯದ ಜನ ನನಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯದ ಗ್ಯಾರಂಟಿ ನೀಡಿ ಎಂದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಮಾಜ ಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿದ್ದರಿಂದ ಎಲ್ಲವೂ ಹದಗೆಡುತ್ತಿದೆ. ಸಣ್ಣ ಸಣ್ಣ ಕಾಮಗಾರಿ ಗಳನ್ನು ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಎಲ್ಲ ಶಾಸಕರಿಗೆ ದುಡ್ಡಿಲ್ಲ ಎಂದು ಹೇಳಲಾಗಿದೆ. ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೇಗೆ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಆರೋಪ ಪಟ್ಟಿಯನ್ನೇ ಮಾಡಿದರು.
ಯುವಕರಿಗೆ ದೊಡ್ಡದಾದ ಭರವಸೆ ನೀಡಿ ಶಿಷ್ಯ ವೇತನ ನೀಡಲಾಗುತ್ತಿಲ್ಲ. ಪ್ರಮುಖವಾಗಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಸರ್ಕಾರದ ಭೃಷ್ಟಾಚಾರ ಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿಗಾ ವಹಿಸುವಂತಾಗಲು ತಮಗೆ ಬಲ ತುಂಬಬೇಕು. 28 ಕ್ಕೆ 28 ಸೀಟುಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ತಮ್ಮ ಬಿಜೆಪಿ ಸರ್ಕಾರವಿದ್ದಾಗ ಕೆಕೆಆರ್ ಡಿಬಿ ಗೆ ಸಾವಿರಾರು ಕೋ.ರೂ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಹೆಚ್ಚು ಹಣ ನಿಗದಿ ಮಾಡಲು ಇಚ್ಚಾಶಕ್ತಿತೋರುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.