ಕಲಬುರಗಿ: ಕರ್ನಾಟಕದಲ್ಲಿ ಬರಗಾಲವಿದ್ದರೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನಾಲ್ಕು ಸಾವಿರ ರೂ ಪ್ರೋತ್ಸಾಹ ಧನ ನಿಲ್ಲಿಸಿದ್ದೇಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಪ್ರಶ್ನಿಸಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಿನಿಂದಲೂ ಮಳೆ ಕೊರತೆಯಿದ್ದರೂ ಸಿಎಂ ಸಿದ್ದರಾಮಯ್ಯ ಕಿಸಾನ್ ಸಮ್ಮಾನ ನಿಧಿ ಯೋಜನೆ ಬಂದ್ ಮಾಡಿದ್ದೇಕೆ? ಉತ್ತರ ಪ್ರದೇಶ, ಮಹಾರಾಷ್ಟ್ರ ನಂತರ ಕರ್ನಾಟಕದಲ್ಲೇ ಹೆಚ್ಚಿನ ರೈತರಿದ್ದಾರೆ. ಇದರರ್ಥ ರೈತರ ಬಗೆಗೆ ರಾಜ್ಯ ಸರ್ಕಾರದ ಕಾಳಜಿ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದು ಟೀಕಿಸಿದರು.
ಕೇಂದ್ರದ ಕಿಸಾನ ಸಮ್ಮಾನ ನಿಧಿ ಯೋಜನೆ 6000 ರೂ ಜತೆಗೆ ರಾಜ್ಯ ಸರ್ಕಾರದಿಂದ 4000 ರೂ. ಸಹಾಯ ಧನ ನೀಡುವ ಯೋಜನೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಾರಿ ತರಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಬಂದ ಕೂಡಲೇ ಬರಗಾಲವಿದ್ದರೂ ಯಾವುದನ್ನು ನೋಡದೇ ಬಂದ್ ಮಾಡಲಾಯಿತು ಎಂದು ಟೀಕಿಸಿದರು.
ರೈತರಿಗೆ ಮೊದಲು ಸ್ಪಂದಿಸುವುದು ಬಿಟ್ಟು ಬರೀ ಕೇಂದ್ರದತ್ತ ಮಾತ್ರ ಬೊಟ್ಟು ಮಾಡುವುದು ಸರಿಯಲ್ಲ ಎಂದು ಇದೇ ಸಂದರ್ಭದಲ್ಲಿ ರಾಧಾ ಮೋಹನ್ ಹೇಳಿದರು.
ಸೋಲುವ ಭಯದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಪುತ್ರ ಡಾ.ಯತೀಂದ್ರ ಹಾಗೂ ಸಚಿವರ್ಯಾರು ಸ್ಪರ್ಧಿಸುತ್ತಿಲ್ಲ ಎಂದು ಅಗರ್ವಾಲ್ ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 9 ಸಲ ಶಾಸಕರು ಹಾಗೂ ಎರಡು ಸಲ ಸಂಸದರಾಗಿ ಎಲ್ಲ ಹಂತದ ಆಡಳಿತ ಅಧಿಕಾರ ಹೊಂದಿದ್ದರೂ ಜತೆಗೆ ಅವರ ಮಗ ಮೂರು ಸಲ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರೂ ಕಲಬುರಗಿ ಭಾಗ ಏಕೆ ಹಿಂದುಳಿಯುವಂತಾಗಿದೆ ಎಂಬುದು ಮತದಾರರಿಗೆ ಮನವರಿಕೆವಿದ್ದು ಇದೇ ಕಾರಣಕ್ಕೆ ಡಾ. ಉಮೇಶ ಜಾಧವ್ ಮತ್ತೊಮ್ಮೆ ಭಾರಿ ಅಂತರದಿಂದ ಸಂಸದರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಬಸವರಾಜ ಮತ್ತಿಮಡು, ರಘುನಾಥ್ ಮಲ್ಕಾಪುರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ನಗರಾಧ್ಯಕ್ಷ ಚಂದುಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸೇರಿದಂತೆ ಮುಂತಾದವರಿದ್ದರು.