ಜನವಾಡ: ಬೀದರ್ ತಾಲ್ಲೂಕಿನ ಗುನ್ನಳ್ಳಿ ಗ್ರಾಮದಲ್ಲಿ ಏಪ್ರಿಲ್ 19 ಮತ್ತು 20 ರಂದು ವೀರಭದ್ರೇಶ್ವರ 10ನೇ ಜಾತ್ರಾ ಮಹೋತ್ಸವ ಜರುಗಲಿದೆ. ಜಾತ್ರೆ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನ ಶೃಂಗಾರಗೊಂಡಿದೆ. ಸಿದ್ಧತೆಗಳು ಪೂರ್ಣಗೊಂಡಿವೆ.
19ರಂದು ಸಂಜೆ 4ರಿಂದ 6ರವರೆಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯಲಿದೆ. ಸಂಜೆ 6.30ಕ್ಕೆ ತಡೋಳಾದ ರಾಜೇಶ್ವರ ಶಿವಾಚಾರ್ಯರನ್ನು ಗ್ರಾಮದ ಪ್ರಮುಖ ರಸ್ತೆಯಿಂದ ಭವ್ಯ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆ ತರಲಾಗುವುದು. ನಂತರ ನಡೆಯುವ ಸಮಾರಂಭದಲ್ಲಿ ರಾಜೇಶ್ವರ ಶಿವಾಚಾರ್ಯ ಹಾಗೂ ಖಟಕ ಚಿಂಚೋಳಿಯ ಹುಗ್ಗೆಳ್ಳಿ ಮಠದ ಬಸವಲಿಂಗ ದೇವರು ಪ್ರವಚನ ನೀಡುವರು. ಬಳಿಕ ಪ್ರಸಾದ ವಿತರಣೆ ಜರುಗಲಿದೆ.
ಏ.20 ರಂದು ಬೆಳಿಗ್ಗೆ 4ರಿಂದ 6ರವರೆಗೆ ರುದ್ರಾಭಿಷೇಕ, ನಂತರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಂಜೆ 6 ರಿಂದ ರಾತ್ರಿ 12 ರವರೆಗೆ ಗುನ್ನಳ್ಳಿ ಗ್ರಾಮದ ಮಹಿಳೆಯರು ಕೋಲಾಟ ಪ್ರದರ್ಶನ ನೀಡುವರು.
ಕಲಾವಿದ ಕಲ್ಯಾಣರಾವ್ ಪಾಟೀಲ ಗುಮ್ಮಾ ಹಾಗೂ ಸಂಗಡಿಗರು ಸಂಗೀತ ದರ್ಬಾರ್ ನಡೆಸಿಕೊಡುವರು ಎಂದು ಗ್ರಾಮದ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುನೀಲಕುಮಾರ ನಾಗಶೆಟ್ಟಿ ಬಿರಾದಾರ ಗುನ್ನಳ್ಳಿ ಅವರು ತಿಳಿಸಿದ್ದಾರೆ.