ಬೀದರ್: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹಕ್ಕೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರ ಕುಮ್ಮಕ್ಕು ಕಾರಣ. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಡೋಂಗಿ ರೈತರಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ನಡೆದ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ಯಾಗ್ರಹದಲ್ಲಿನ ರೈತರು ಅಗರ್ಭ ಶ್ರೀಮಂತರಿದ್ದು, ಕೃಷಿಯ ಬಗ್ಗೆ ಅರಿವೇ ಇಲ್ಲದ, ದಲ್ಲಾಳಿಗಳಿದ್ದಾರೆ, ಬಡ ರೈತರನ್ನು ದಾರಿ ತಪ್ಪಿಸಿ, ಅವರನ್ನು ಪ್ರಚೋದಿಸಿ, ಸರಕಾರದ ವಿರುದ್ಧ ನಿಲ್ಲುವಂತೆ ಮಾಡುತ್ತಿದ್ದಾರೆ ಆರೋಪಿಸಿದರು.
ನಮ್ಮ ರೈತರು ಟ್ರ್ಯಾಕ್ಟರ್ ಅನ್ನು ಅವಲಂಬಿಸಿದರೆ, ದೆಹಲಿ ರೈತ ಮುಖಂಡರ ಬಳಿ ಆಡಿ, ಬೆಂಜ್ ಕಾರುಗಳಿವೆ, ನಮ್ಮವರು ರೊಟ್ಟಿ ತಿಂದರೆ, ಅವರುಗಳು ಪಿಜಾ, ಬರ್ಗರ್ ತಿನ್ನುವ ರೈತರಿದ್ದಾರೆ, ಇಂತಹ ಡೋಂಗಿ ರೈತರುಗಳಿಗೆ ನಂಬಬೇಡಿ ಎಂದರು.
ಸಭೆಯಲ್ಲಿ ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ನೀಡಿದ ಕೊಡುಗೆಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.