ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತಾಲೂಕು ಆಡಳಿತ ಶಾಕ್ ನೀಡಿದ್ದು, ದೇವರ ದರ್ಶನದ ಅವಧಿಯನ್ನು ಕಡಿತ ಮಾಡಿರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.
ಈ ಮೊದಲು ದೇವರ ದರ್ಶನ ಪಡೆಯಲು ಸಾಯಂಕಾಲ 4 ಗಂಟೆಯವರೆಗೆ ಇದ್ದ ಸಮಯವನ್ನು ಒಂದು ಗಂಟೆ ಕಾಲ ಕಡಿತಗೊಳಿಸಿ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಿ ತಹಶೀಲ್ದಾರ್ ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು ಮತ್ತು ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಸಂಜೆ ಸಮಯದಲ್ಲಿ ಬರುವ ಪ್ರವಾಸಿಗರು ದೇವಸ್ಥಾನದ ಬಳಿ ಆಗಮಿಸುವ ಕಾಡಾನೆಯ ಬಳಿ ತೆರಳಿ ಸೆಲ್ಫಿ ತೆಗೆದುಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿತ್ತು.
ಕಾಡಾನೆಯಿಂದ ಪ್ರವಾಸಿಗರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಬಂಡೀಪುರ ಸಹಾಯಕ ಅರಣ್ಯ ಅಧಿಕಾರಿಗಳ ಕೋರಿಕೆಯ ಮೇರೆಗೆ ಈ ಹಿಂದೆ ಬೆಳಿಗ್ಗೆ 9 ರಿಂದ ಸಂಜೆ 4ಗಂಟೆಯವರೆಗೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶವಿತ್ತು. ಈಗ ತಹಶೀಲ್ದಾರ್ ಟಿ.ರಮೇಶ್ ಬಾಬು ಮಧ್ಯಾಹ್ನ 3 ಗಂಟೆ ಬಳಿಕ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 9ಗಂಟೆಯಿಂದ ಸಂಜೆ 3ರವರೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. 3 ಗಂಟೆಗೆ ದೇವಸ್ಥಾನದಿಂದ ಹೊರಡುವ ಬಸ್ನಲ್ಲಿ ಭಕ್ತಾದಿಗಳು ಹಾಗೂ 4.30 ಗಂಟೆಗೆ ಹೊರಡುವ ಬಸ್ಸಿನಲ್ಲಿ ದೇವಸ್ಥಾನದ ಸಿಬ್ಬಂದಿಗಳು ವಾಪಸ್ ತೆರಳಲು ಸೂಚನೆ ನೀಡಿದ್ದಾರೆ. ಜತೆಗೆ ಭಕ್ತರಿಗೆ ನೀಡುವ ಪ್ರಸಾದದ ವಾಸನೆಯಿಂದ ಕಾಡಾನೆಯು ದೇವಸ್ಥಾನದ ಬಳಿ ಬರುವ ಸಂಭವವಿರುವುದರಿಂದ ಪ್ರಸಾದ ನೀಡಲು ಅರಣ್ಯದ ಹೊರಗಿನ ಬೆಟ್ಟದ ತಪ್ಪಲಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅರ್ಚಕರಿಗೆ ಸೂಚನೆ ನೀಡಿದ್ದಾರೆ.