ಔರಾದ: ಔರಾದ ನಿಂದ ಚಿಂತಾಕಿಗೆ ಸಾರಿಗೆ ಬಸ್ ಓಡಿಸುವಂತೆ ಒತ್ತಾಯಿಸಿ ಚಿಂತಾಕಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಔರಾದ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ ಆದರೆ ಔರಾದ- ಚಿಂತಾಕಿ ಮಾರ್ಗದಲ್ಲಿ ಒಂದೇ ಬಸ್ಸಿನ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗದೆ ಇರುವುದರಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಆದಷ್ಟು ಬೇಗ ನೂತನ ಬಸ್ ಓಡಿಸುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಒಂದು ವೇಳೆ ಐದು ದಿನಗಳ ಒಳಗಾಗಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸದಿದ್ದರೆ ಶಾಲೆಗೆ ಹಾಜರಾಗದೆ ರಸ್ತೆ ಮಧ್ಯದಲ್ಲಿ ಬಸ್ ತಡೆದು ಒಂದು ದಿವಸದ ಉಪವಾಸ ಸತ್ಯಾಗ್ರಹದ ಮೂಲಕ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚಿಂತಾಕಿ ಶಾಲೆಯ ವಿದ್ಯಾರ್ಥಿಗಳು, ಕರವೇ ಪದಾಧಿಕಾರಿಗಳು, ಊರಿನ ಜನರು ಹಾಜರಿದ್ದರು.