ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ಅವರ ದೀಕ್ಷಾ ಭೂಮಿ ನಾಗಪುರದಲ್ಲಿ ಹಮ್ಮಿಕೊಂಡಿರುವ 68ನೇ ಅಶೋಕ ವಿಜಯದಶಮಿ, ಧಮ್ಮ ಚಕ್ರ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಹೋಗಿ ಬರುವ ಬೌದ್ಧ ಅನುಯಾಯಿಗಳ ಅನುಕೂಲಕ್ಕಾಗಿ ಬೀದರ್-ನಾಗಪುರ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ವಿಶೇಷ ರೈಲು (ಗಾಡಿ ಸಂಖ್ಯೆ: 07023) ಭಾನುವಾರ (ಅ.22) ಸಂಜೆ 6.45ಕ್ಕೆ ಬೀದರ್ನಿಂದ ಹೊರಟು ಜಹೀರಾಬಾದ್, ಮರಪಳ್ಳಿ, ವಿಕಾರಾಬಾದ್, ಸಿಕಿಂದ್ರಬಾದ್, ಸೇವಾಗ್ರಾಮ ಮೂಲಕ ಮರುದಿನ (ಅ.23) ಬೆಳಿಗ್ಗೆ8.30ಕ್ಕೆ ನಾಗಪುರ ತಲುಪಲಿದೆ. ಇದೇ ರೈಲು (ಗಾಡಿ ಸಂಖ್ಯೆ: 07024) ಅ. 24ರಂದು ಸಂಜೆ 7.10ಕ್ಕೆ ನಾಗಪುರದಿಂದ ಹೊರಟು ಅ. 25ರಂದು ಬೆಳಿಗ್ಗೆ 10.15ಕ್ಕೆ ಬೀದರ್ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯ ಜನ ನಾಗಪುರಕ್ಕೆ ಹೋಗುತ್ತಾರೆ. ಬಸ್, ಖಾಸಗಿ ವಾಹನಗಳು ಹಾಗೂ ಸಿಕಿಂದ್ರಾಬಾದ್ನಿಂದ ರೈಲಿನ ಮೂಲಕ ತೆರಳುತ್ತಿದ್ದರು. ಬಸ್ಸಿನ ಅವ್ಯವಸ್ಥೆಯಿಂದ ಆಗುವ ಸಮಸ್ಯೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿಯವರು ಗಮನಕ್ಕೆ ತಂದಿದ್ದರು. ಅದನ್ನು ಪರಿಶೀಲಿಸಿ, ತಕ್ಷಣವೇ ವಿಶೇಷ ರೈಲಿಗೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಮನವಿಗೆ ಅಷ್ಟೇ ತ್ವರಿತ ಗತಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಂದಿಸಿದ್ದು, ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.